ಸೀತೆ ರಾವಣನ ಮಗಳು, ಹನುಮಂತ ಸ್ತ್ರೀಲೋಲ!
2008ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಕಚೇರಿ ಧ್ವಂಸಗೊಳಿಸಿದ ನಂತರ ಪ್ರಕರಣದ ಬಿಸಿ ಎಲ್ಲರಿಗೂ ಮುಟ್ಟಿತು. ನಂತರ ಇದು ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು. ನಾಲ್ವರು ಹಿರಿಯ ಪ್ರೊಫೆಸರ್ ಗಳನ್ನು ನೇಮಕ ಮಾಡಿದ್ದ ಸುಪ್ರೀಂಕೋರ್ಟ್ ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಹೇಳಿತ್ತು.
ಕೊನೆಗೆ ವಿವಾದಿತ ಪಠ್ಯವನ್ನು ಕೈಬಿಡಲು ದಿಲ್ಲಿ ವಿಶ್ವವಿದ್ಯಾಲಯ ನಿರ್ಧರಿಸಿತು. ಆದರೆ, ಇದು ಬಲಪಂಥೀಯ ಧೋರಣೆಯಾಗುತ್ತದೆ ಎಂದು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.
ಎಬಿವಿಪಿ ವಿರೋಧಕ್ಕೆ ಕಾರಣ: ಎಕೆ ರಾಮಾನುಜನ್ ಅವರ ಪ್ರಬಂಧದಲ್ಲಿ ಸೀತೆ ರಾವಣನ ಮಗಳು, ರಾವಣ ವಿಲನ್ ಅಲ್ಲ, ದುರಂತ ನಾಯಕ ಎಂದು ಬಿಂಬಿಸಲಾಗಿದೆ. ಇದಲ್ಲದೆ ಹನುಮಂತ ಸ್ತ್ರೀಲೋಲ, ಲಂಪಟ ಎನ್ನಲಾಗಿದೆ ಇದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಎಬಿವಿಪಿ ಬೆಂಬಲಿಸುತ್ತಿರುವ ಹಿಂದಿ ಪ್ರಾಧ್ಯಾಪಕ ಅಗ್ನಿವೇಶ್ ಅವಸ್ಥಿ ಪ್ರಶ್ನಿಸುತ್ತಾರೆ.
Many Ramayan ಎಂಬ ಹೆಸರಿನ ಪೌಲಾ ರಿಚ್ಮನ್ ಅವರ ಸಂಪಾದಿತ ಕೃತಿಯ ಎರಡನೇ ಅಧ್ಯಾಯದಲ್ಲಿ ಎಕೆ ರಾಮಾನುಜನ್ ಅವರ ಪ್ರಬಂಧ ಓದುಗರಿಗೆ ಲಭ್ಯವಿದೆ. ಪ್ರಬಂಧದ ಆರಂಭದಲ್ಲೇ ರಾಮಾಯಣ ಕೃತಿ ಎಷ್ಟಿದೆ? ಮುನ್ನೂರು?ಮೂರು ಸಾವಿರ? ಯಾವುದು ನಿಜ ಎಂದು ಪ್ರಶ್ನಿಸಲಾಗಿದೆ.
22ಕ್ಕೂ ಅಧಿಕ ಭಾಷೆಗಳಲ್ಲಿ ಸಾವಿರಾರು ಆವೃತ್ತಿಯ ರಾಮಾಯಣ ನಿಮಗೆ ಸಿಗುತ್ತದೆ. ಸೀತೆ ರಾವಣನ ಮಗಳು ಎಂದು ಜೈನ ರಾಮಾಯಣ ಕೂಡಾ ಪ್ರತಿಪಾದಿಸುತ್ತದೆ. ಎಕೆ ರಾಮಾನುಜನ್ ಅವರ ಪ್ರಬಂಧದಲ್ಲಿರುವ ಅಂಶಗಳ ಬಗ್ಗೆ ಬಹಿರಂಗ ಚರ್ಚೆ ಅಗತ್ಯ ಎಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.