ಅಡ್ವಾಣಿ ಯಾತ್ರೆ ರದ್ದಾಗಿಲ್ಲ, ಬೆಂಗಳೂರಿಗೆ ಬರುವುದು ಖಚಿತ
ರಥಯಾತ್ರೆಯನ್ನು ಬೆಂಗಳೂರಿಗೆ ಖಂಡಿತ ತರುವುದಾಗಿ ಸ್ವತಃ ಅಡ್ವಾಣಿಯವರು ಹೇಳಿದ್ದು, ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಜೈಲು ಸೇರಿರುವುದರಿಂದ ಮತ್ತು ಕೆಲವರು ವಿಚಾರಣೆ ಎದುರಿಸುತ್ತಿರುವುದರಿಂದ ಯಾತ್ರೆ ರದ್ದಾಗಿದೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
"ಬೆಂಗಳೂರು ಯಾತ್ರೆ ರದ್ದಾಗಿರುವುದರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕಾಗಿ ಕರ್ನಾಟಕಕ್ಕೆ ಮತ್ತು ಬೆಂಗಳೂರಿಗೆ ಖಂಡಿತ ಹೋಗಿಯೇ ಹೋಗುತ್ತೇನೆ" ಎಂದು ಸ್ವತಃ ಅಡ್ವಾಣಿಯವರೇ ಹೇಳಿ ಬಿಜೆಪಿ ನಾಯಕರುಗಳ ಬಾಯಿಗೆ ಬೀಗ ಜಡಿದಿದ್ದಾರೆ. ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದ ಅಡ್ವಾಣಿಯವರ ಬರುವಿಕೆಯಿಂದ ಈಗ ಮುಜುಗರಕ್ಕೀಡಾಗುವ ಸರದಿ ರಾಜ್ಯ ನಾಯಕರದ್ದು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೂ ಕಬಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದು ಮತ್ತು ಅ.30ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯ ನೇತೃತ್ವವನ್ನು ವಹಿಸಿರುವ ಆರ್ ಅಶೋಕ್ ಅವರು ಕೂಡ ವಿಚಾರಣೆ ಎದುರಿಸುತ್ತಿರುವುದು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಸಾಕಷ್ಟು ಮುಜುಗರಕ್ಕೀಡುಮಾಡಿತ್ತು.
ಇವರು ಮಾತ್ರವಲ್ಲ ಬಿಜೆಪಿ ನಾಯಕರುಗಳಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಹರತಾಳು ಹಾಲಪ್ಪ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದು, ಕರುಣಾಕರ ರೆಡ್ಡಿ, ವಿ ಸೋಮಣ್ಣ ಮತ್ತು ಶ್ರೀರಾಮುಲು ಅವರ ಹೆಸರು ಈಗಾಗಲೆ ಅಕ್ರಮ ಗಣಿಗಾರಿಕೆ ನಡೆಸಿದವರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಜನಾರ್ದನ ರೆಡ್ಡಿ ಕೂಡ ಕಂಬಿ ಎಣಿಸುತ್ತಿದ್ದಾರೆ.
ಬಿಜೆಪಿಯ ಮೇಲೆರಗಿರುವ ಭ್ರಷ್ಟಾಚಾರ ಆರೋಪಗಳು ಮತ್ತು ಹೆಚ್ಚಾಗಿ ಯಡಿಯೂರಪ್ಪನವರ ಪ್ರಕರಣದಿಂದಾಗಿ, ಬೆಂಗಳೂರಿನಲ್ಲಿ ಸಭೆ ನಡೆಸಿ ಮತ್ತಷ್ಟು ಮುಜುಗರಕ್ಕೀಡಾಗುವ ಬದಲು ರಥಯಾತ್ರೆಯನ್ನೇ ಕೈಬಿಡಲಾಗಿದೆ ಎಂದು ಬಿಜೆಪಿಯ ಮೂಲಗಳಿಂದ ತಿಳಿದುಬಂದಿತ್ತು. ಈ ಬಗ್ಗೆ ಬಿಜೆಪಿಯ ರಾಜ್ಯ ನಾಯಕರು ಚರ್ಚೆ ಕೂಡ ನಡೆಸಿದ್ದರು.