ಖೇಣಿ ಮೇಲೆ ಬಿತ್ತು ಮರ್ಡರ್ ಕೇಸ್, ಬಿಕ್ಕಿಬಿಕ್ಕಿ ಅತ್ತ ದೇವೇಗೌಡ
ಮೃತ ಸಿದ್ದಲಿಂಗಪ್ರಭು ನೈಸ್ ವಿರೋಧಿ ಹೋರಾಟದ ಅಧ್ಯಕ್ಷ ಪಂಚಲಿಂಗಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರ ಜೊತೆ ಹೋರಾಟದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಮೃತ ವ್ಯಕ್ತಿಯ ಶವ ನೈಸ್ ರಸ್ತೆಯ ಸಮೀಪದಲ್ಲೇ ಬರುವ ರಾಚನಮಡು ಹಳ್ಳದಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಸಿದ್ದಲಿಂಗಪ್ರಭು ಅವರನ್ನು ಕೊಲೆ ಮಾಡಿ ಶವವನ್ನು ಇಲ್ಲಿ ಎಸೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತ ವ್ಯಕ್ತಿಯ ಚಿಕ್ಕಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಶೋಕ್ ಖೇಣಿ ಅವರ ಆಪ್ತ ಎಂ. ರುದ್ರೇಶ್, ಸಿದ್ದಲಿಂಗಪ್ರಭು ಅವರಿಗೆ ನೈಸ್ ಹೋರಾಟದಿಂದ ಹಿಂದಕ್ಕೆ ಸರಿಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿದ್ದಾರೆ. ಅಶೋಕ್ ಖೇಣಿ ಮತ್ತು ರುದ್ರೇಶ್ ಈ ಕೊಲೆಗೆ ಕಾರಣ, ತಕ್ಷಣವೇ ಅವರನ್ನು ಬಂಧಿಸ ಬೇಕೆಂದು ಒತ್ತಾಯಿಸಿದ್ದಾರೆ.
ಮೃತ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಮಾಜಿ ಪ್ರಧಾನಿ ಕುಟುಂಬದವರ ಗೋಳಾಟ ನೋಡಲಾರದೆ ತಾನೂ ಬಿಕ್ಕಿಬಿಕ್ಕಿ ಅತ್ತ ಪ್ರಸಂಗ ನಡೆಯಿತು. ಈ ಕೊಲೆಯ ಹಿಂದೆ ಖೇಣಿ ರೌಡಿಗಳ ಕೈವಾಡವಿದೆ. ಈ ಖೇಣಿ ಮಹಾನ್ ಕೊಲೆಗಡುಕ, ಈತನನ್ನು ತಕ್ಷಣ ಬಂಧಿಸಲಿ ಎಂದು ಆಗ್ರಹಿಸಿದ್ದಾರೆ.