ಬರ: ವಿಶೇಷ ಅಧಿವೇಶನಕ್ಕೆ ಸಿದ್ದರಾಮಯ್ಯ ಆಗ್ರಹ
ಯಾದಗಿರಿ ಅಥಿತಿ ಗೃಹದಲ್ಲಿ ಜಿಲ್ಲೆಯ ಅಧಿಕಾರಿಗಳ ಜತೆ ಬರ ಸ್ಥಿತಿಯನ್ನು ಅಧ್ಯಯನ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾದಗಿರಿ ಜಿಲ್ಲೆಗೆ ಸುಮಾರು 300 ಕೋಟಿ ರು. ನಷ್ಟ ವಾಗಿದೆ. ಜಾನುವಾರುಗಳಿಗೆ ಮೇವಿನ ಬರ ಉಂಟಾಗಿದೆ. ಬಿಜೆಪಿ ಸರಕಾರ ನೆಪಮಾತ್ರಕ್ಕೆ ಬರಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಿ ಕೈತೊಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲೆಯಲ್ಲಿ 136 ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಆದರೂ ಮುಂಜಾಗೃತಾ ಕ್ರಮವಾಗಿ ಒಂದು ಪೈಸೆ ಹಣವನ್ನು ಬಿಡುಗಡೆ ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ವಿದ್ಯುತ್ ಕೇವಲ ಎರಡು ಗಂಟೆ ಮಾತ್ರ ಸಿಗುತ್ತಿದೆ. ಆದರೆ ಈ ಸರಕಾರ ಜನರ ಸಮಸ್ಯೆ ಕಡೆ ಗಮನ ಹರಿಸುತ್ತಿಲ್ಲ. ಜನರ ಸಮಸ್ಯೆ ಪರಿಹರಿಸುವ ಮನಸ್ಸು ಇಲ್ಲದಿದ್ದರೆ ಕೂಡಲೆ ಅಧಿಕಾರದಿಂದ ಕೆಳಗೆ ಇಳಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೋರಾಟ: ವಿದ್ಯುತ್ ಕ್ಷಾಮ ನೀಗಿಸುವುದು, ಬರ ಪರಿಹಾರ ಕೆಲಸ ಆರಂಭಿಸುವುದು ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇದೇ ತಿಂಗಳು 21 ಮತ್ತು 22ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಸಿದ್ದರಾಮಯ್ಯ ತಿಳಿಸಿದರು. 21ರಿಂದ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪಂಜಿನ ಪ್ರತಿಭಟನಾ ರ್ಯಾಲಿಗಳನ್ನು ನಡೆಸಲಾಗುವುದು, 22ರಂದು ತಾಲೂಕು ಮಟ್ಟದಲ್ಲಿ ಹೋರಾಟಮಾಡಲಾಗುವುದು ಎಂದರು.