ತಲಕಾವೇರಿಯಲ್ಲಿ ಅ.17 ರಾತ್ರಿ ತೀರ್ಥೋದ್ಭವ
ಈ ಬಾರಿ ರಾತ್ರಿ ವೇಳೆ ಕಾವೇರಿ ತೀರ್ಥರೂಪಿಣಿಯಾಗಿ ಮೈದಳೆಯುವುದರಿಂದ ಬೆಳಕಿನ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಸ್ವಚ್ಛತೆ, ಸುರಕ್ಷತೆ ಹಾಗೂ ಆರೋಗ್ಯಕ್ಕಕೆ ಸಂಬಂಧಪಟ್ಟಂತೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಡಿಕೇರಿಯಿಂದ ಭಾಗಮಂಡಲಕ್ಕೆ ಹೆಚ್ಚುವರಿ ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಿರಿದಾದ ರಸ್ತೆಗಳಾಗಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಇನ್ನು ಬಂದೋಬಸ್ತ್ಗಾಗಿ ಸುಮಾರು 800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಹೊರಗಿನಿಂದ 60ಪೊಲೀಸ್ ಅಧಿಕಾರಿಗಳು, 300 ಸಿಬ್ಬಂದಿಗಳು, 4 ಕೆಎಸ್ಆರ್ಪಿ, 10 ಡಿಎಆರ್ ತುಕಡಿಗಳನ್ನು ಕರೆಸಲಾಗುತ್ತಿದೆ. ಅಲ್ಲದೆ ಭಾಗಮಂಡಲದಿಂದ ತಲಕಾವೇರಿಯವರೆಗೆ ಎರಡು ಬೈಕ್ಗಳಲ್ಲಿ ಪೊಲೀಸರು ಗಸ್ತು ನಡೆಸಲಿದ್ದಾರೆ.
ರಾತ್ರಿ ತೀರ್ಥೋದ್ಭವಾಗುವುದರಿಂದ ಸೋಮವಾರ ಸಂಜೆ 7ರಿಂದ ಬುಧವಾರ ಬೆಳಿಗ್ಗೆ 6ರವರೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ. ಇನ್ನು ಭಾಗಮಂಡಲದ ಸಂಗಮದಲ್ಲಿ ತೀರ್ಥಸ್ನಾನ ಮಾಡುವ ಸಂದರ್ಭ ಕೆಲವು ಕಿಡಿಗೇಡಿಗಳು ಮೊಬೈಲ್ ಕ್ಯಾಮರಾಗಳಲ್ಲಿ ಮಹಿಳೆಯರ ಚಿತ್ರಗಳನ್ನು ತೆಗೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ಮೊಬೈಲ್ನಲ್ಲಿ ಫೋಟೋ ತೆಗೆಯುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಫೋಟೋ ತೆಗೆದಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮಫ್ತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.
ತೀರ್ಥೋದ್ಭವ ಸಂದರ್ಭ ನೂಕುನುಗ್ಗಲು ಉಂಟಾಗುವುದರಿಂದ ನೆರೆದ ಭಕ್ತರಿಗೆ ತೀರ್ಥೋದ್ಭವದ ಭವ್ಯ ಕ್ಷಣಗಳನ್ನು ನೋಡಲು ತಲಕಾವೇರಿಯಲ್ಲಿ ಬೃಹತ್ ಪರದೆಯಲ್ಲಿ ಪ್ರದರ್ಶನಕ್ಕೆ ನಾಲ್ಕು ಕಡೆ ಅವಕಾಶ ಮಾಡಿಕೊಡಲಾಗುತ್ತಿದೆ.