ನ್ಯಾ. ಗುರುರಾಜನ್ ಕೊನೆಗೂ ರಾಜೀನಾಮೆ ಸಲ್ಲಿಸಿದ್ದೇಕೆ?
ಗುರುರಾಜನ್ ತಮ್ಮ ರಾಜೀನಾಮೆ ಪತ್ರದಲ್ಲಿ ಅನಾರೋಗ್ಯದ ಕಾರಣವನ್ನು ಉಲ್ಲೇಖಿಸಿದ್ದಾರೆ. ಆದರೆ ವಾಸ್ತವ ಅದಲ್ಲ ಎಂಬುದು ಗಮನಾರ್ಹ. ಲೋಕಾಯುಕ್ತರಾಗಿದ್ದ ನ್ಯಾ.ಶಿವರಾಜ್ ವಿ ಪಾಟೀಲ್ ಅವರು ಗೃಹ ನಿರ್ಮಾಣ ಸಂಘದಿಂದ ನಿಯಮಬಾಹಿರ ನಿವೇಶನ ಪಡೆದುಕೊಂಡಿರುವ ಆರೋಪದ ಮೇಲೆ ರಾಜೀನಾಮೆ ನೀಡಿದ ತಕ್ಷಣವೇ 2ನೇ ಉಪ ಲೋಕಾಯುಕ್ತ ನ್ಯಾ. ಗುರುರಾಜನ್ ಕೂಡ ರಾಜೀನಾಮೆ ಸಲ್ಲಿಸಬೇಕಿತ್ತು.
ಆ ಸಂದರ್ಭದಲ್ಲೇ, 'ನಿವೇಶನ ವಿವಾದದ ಕಾರಣದಿಂದ ನೀವೂ ಪದತ್ಯಾಗಕ್ಕೆ ಸಿದ್ಧರಾಗಿದ್ದೀರಂತೆ?' ಎಂದು ಗುರುರಾಜನ್ ಅವರನ್ನು ಪ್ರಶ್ನಿಸಲಾಗಿತ್ತು. ಅದಕ್ಕೆ ಅವರು 'ಅಂತಹ ಪ್ರಮೇಯವೇನೂ ಇಲ್ಲ' ಎಂದು ತಳ್ಳಿಹಾಕಿದ್ದರು. ಆದರೆ 'ಈ ಬೆಳವಣಿಗೆಗಳಿಂದ ನೋವಾಗಿದೆ' ಎಂದು ಹೇಳಿಕೊಂಡಿದ್ದರು.
ಒಂದು ತಿಂಗಳ ಹಿಂದೆಯೇ ನ್ಯಾ. ಗುರುರಾಜನ್ ವಿರುದ್ಧ ಹೌಸಿಂಗ್ ಸೊಸೈಟಿ ನಿವೇಶನ ಹೊಂದಿರುವ ಆರೋಪ ಕೇಳಿಬಂದಾಗ ಅವರ ರಾಜೀನಾಮೆಗೆ ಒತ್ತಡ ಶುರುವಾಗಿತ್ತು. ಆದರೆ ರಾಜೀನಾಮೆ ಕೊಡಲು ನಿಧಾನಗತಿ ಅನುಸರಿಸಿದರು. ತಮ್ಮ ಹೆಸರಿನಲ್ಲಿರುವ ನಿವೇಶನಗಳ ಬಗ್ಗೆ ಕಾನೂನು ಸಲಹೆ ಪಡೆಯುತ್ತಾ ಕಾಲತಳ್ಳಿದರು. 'ಗೌರವಾನ್ವಿತ' ನಿರ್ಗಮನ ಬಯಸಿದ್ದರು.
ಆದರೆ, ಇನ್ನೇನು ತಮ್ಮ ಮೇಲಿನ ಈ ಆರೋಪ ಮಾಧ್ಯಮದ ಮೂಲಕ ಹೊರ ಜಗತ್ತಿಗೆ ಗೊತ್ತಾದರೆ ಕಳಂಕ ತಟ್ಟುತ್ತದೆ. ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಬೇಕಾಗುತ್ತದೆ ಎನ್ನುವ ಆತಂಕಕ್ಕೆ ಬಿದ್ದರು. ಈ ಹಿನ್ನೆಲೆಯಲ್ಲೇ ಅವರು ಬುಧವಾರ ಯಾವುದೇ ಮುನ್ಸೂಚನೆಗಳಿಲ್ಲದೆ ದಿಢೀರ್ ರಾಜೀನಾಮೆ ಕೊಟ್ಟಿದ್ದಾರೆ.