ಕೂದಲು ಮಾರಿದರೆ 133 ಕೋಟಿ ರು ಲಾಭ: ಟಿಟಿಡಿ
ಹಿಂದೂ ಧಾರ್ಮಿಕತೆಯಂತೆ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದು(ಕೇಶ ಮುಂಡನ) ಬಹು ಜನಪ್ರಿಯ ಹರಕೆಯಾಗಿದೆ. ಹೀಗೆ ಭಕ್ತಾದಿಗಳ ಕೇಶ ಮುಂಡನ ನಂತರ ಸಂಗ್ರಹವಾದ ರಾಶಿ ರಾಶಿ ತಲೆ ಕೂದಲನ್ನು ಇದೇ ಮೊದಲ ಬಾರಿಗೆ ಇ ಹರಾಜು ಹಾಕಲಾಗಿದೆ.
ಸುಮಾರು 65,000 ಕೆ.ಜಿಗೂ ಅಧಿಕ ಕೂದಲ ರಾಶಿ ಕೊಳ್ಳಲು ಸುಮಾರು 49ಕ್ಕೂ ಅಧಿಕ ವರ್ತಕರು ಹರಾಜು ಕೂಗಿದ್ದಾರೆ. ಸಾಮಾನ್ಯ ಹರಾಜು ಪ್ರಕ್ರಿಯೆಯಲ್ಲಿ ನಡೆಯುವ ದಲ್ಲಾಳಿಗಳ ಹಾವಳಿ ತಪ್ಪಿಸಲು ಇ ಹರಾಜಿಗೆ ಮೊರೆ ಹೋಗಬೇಕಾಯಿತು ಎಂದು ಟಿಟಿಡಿ ಮುಖ್ಯ ಆರ್ಥಿಕ ಅಧಿಕಾರಿ ವಿ ಭಾಸ್ಕರ ರೆಡ್ಡಿ ಹೇಳುತ್ತಾರೆ.
ಪಾರದರ್ಶಕ ಹರಾಜು ಪ್ರಕ್ರಿಯೆಯಿಂದ ಸುಮಾರು 30 ಕೋಟಿ ರೂ. ಗೂ ಅಧಿಕ ಲಾಭವಾಗಿದೆ.
ತಿರುಪತಿ ಆರಾಧ್ಯ ದೈವ ವೆಂಕಟೇಶ್ವರ ಸ್ವಾಮಿಯನ್ನು ನೋಡಲು ಪ್ರತಿದಿನ 50,000ಕ್ಕೂ ಅಧಿಕ ಭಕ್ತಾದಿಗಳು ಬರುತ್ತಾರೆ. ವಾರಾಂತ್ಯ, ಹಬ್ಬ ಹರಿದಿನ, ಬ್ರಹ್ಮರಥೋತ್ಸವ, ಶ್ರಾವಣ ಶನಿವಾರದ ಸಮಯದಲ್ಲಿ ಹರಕೆ ಹೊತ್ತ ಭಕ್ತರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು ಬೆಳೆಯುತ್ತದೆ.
ಹರಾಜಾಗುವ ಕೂದಲನ್ನು ಚೆನ್ನಾಗಿ ತೊಳೆದು, ಹಲವು ಬಾರಿ ಶುದ್ಧೀಕರಿಸಿ, ಬಿಸಿಲಲ್ಲಿ ಒಣಗಿಸಲಾಗುತ್ತೆ. ಮುಂದೆ ಇದೇ ಹರಕೆ ಕೂದಲು ವಿಗ್ ಗಳಲ್ಲಿ ಎಲ್ಲರ ಮುಡಿಯೇರುತ್ತದೆ.