ಶ್ರೀರಾಮ ಸೇನೆ ನಿಷೇಧಿಸಿ : ಪ್ರಶಾಂತ್ ಭೂಷಣ್
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕೆ ಬೇಡವೆ ಎಂಬ ಬಗ್ಗೆ ಜನಮತ ಸಂಗ್ರಹಿಸಬೇಕೆಂದು ಪ್ರಶಾಂತ್ ಭೂಷಣ್ ಹೇಳಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಎದುರಿಗಿರುವ ಪ್ರಶಾಂತ್ ಚೇಂಬರಿಗೆ ನುಗ್ಗಿದ ಮೂವರು ಯುವಕರು ಪ್ರಶಾಂತ್ ಅವರನ್ನು ಮನಬಂದಂತೆ ಥಳಿಸಿದ್ದಾರೆ.
ಆದರೆ, ದಾಳಿ ನಡೆಸಿದವರು ಯಾವ ಪಂಗಡಕ್ಕೆ ಸೇರಿದವರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದಾಳಿ ಮಾಡಿದವರು ತಾವು ಶ್ರೀರಾಮ ಸೇನೆಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಪ್ರಶಾಂತ್ ಕೂಡ, ಜನರನ್ನು ಬೆದರಿಸಲು ದಾಳಿ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಶ್ರೀರಾಮ ಸೇನೆಯನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿದ್ದಾರೆ. [ಪ್ರಶಾಂತ್ ಮೇಲಿನ ದಾಳಿಯ ವಿಡಿಯೋ]
ಆದರೆ, ಶ್ರೀರಾಮ ಸೇನೆಯ ನೇತಾರರಾಗಿರುವ ಪ್ರಮೋದ್ ಮುತಾಲಿಕ್ ಅವರು ದಾಳಿ ಮಾಡಿದ್ದು ತಮ್ಮ ಸೇನೆ ಎಂಬುದನ್ನು ಅಲ್ಲಗಳೆದಿದ್ದಾರೆ. ಇದೇ ಸಮಯದಲ್ಲಿ ಭಗತ್ ಸಿಂಗ್ ಕ್ರಾಂತಿ ಸೇನೆ ಎಂಬ ಸಂಘಟನೆ ತಾನೇ ದಾಳಿ ಮಾಡಿದ್ದು ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದೆ.
ದಾಳಿ ಮಾಡಿದ್ದು ಶ್ರೀರಾಮ ಸೇನೆಯೆ ಎಂದು ಬಲವಾಗಿ ನಂಬಿರುವ ಪ್ರಶಾಂತ್ ಭೂಷಣ್, ದಾಳಿಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶ್ರೀರಾಮ ಸೇನೆಯನ್ನು ನಿಷೇಧಿಸಬೇಕೆಂದಿದ್ದಾರೆ. ಪ್ರಶಾಂತ್ ಅವರ ಕಪಾಳಕ್ಕೆ ಹೊಡೆದು, ಅಂಗಿ ಹರಿದು, ಕನ್ನಡಕ ಕಿತ್ತುಹಾಕಿ, ನೆಲಕ್ಕೆ ಬೀಳಿಸಿ ಒದ್ದು ಸಿಕ್ಕುಬಿದ್ದಿರುವ ಇಂದರ್ ವರ್ಮಾ ಎಂಬಾತ ಶ್ರೀರಾಮ ಸೇನೆಯ ಕಟ್ಟಾಳು ಎಂದು ತಿಳಿದುಬಂದಿದೆ.
ಮಾರಲ್ ಪೊಲೀಸ್ ನಂತೆ ವರ್ತಿಸುತ್ತಿರುವ ಶ್ರೀರಾಮ ಸೇನೆಯನ್ನು ನಿಷೇಧಿಸಬೇಕೆಂಬ ಕೂಗು ಅನೇಕ ವರ್ಷಗಳಿಂದ ಕೇಳಿಬರುತ್ತಿದೆ. ಮಂಗಳೂರಿನಲ್ಲಿ ಪಬ್ ನಲ್ಲಿ ಕೆಲ ಯುವತಿಯರನ್ನು ಸೇನೆಯ ಯುವಕರು ಥಳಿಸಿದಾಗ, ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕದ ಪ್ರೇಮಿಗಳನ್ನು ಬೆದರಿಸಿದಾಗ ಕೂಡ ಇದೇ ಕೂಗ ಕೇಳಿಬಂದಿತ್ತು.