ಟೆಕ್ಕಿ ಸುಷ್ಮಾ ನಾಯಕ್ ಆತ್ಮಹತ್ಯೆಗೆ ಏನು ಕಾರಣ?
ಮೂರು ವರ್ಷದ ಹಿಂದೆ ಹೊನ್ನಾವರ ಮೂಲದ ಕಿರಣ್ ನಾಯಕ್ ಎಂಬುವರನ್ನು ಸುಷ್ಮಾ ವಿವಾಹವಾಗಿದ್ದರು. ಕಿರಣ್ ಹಾಗೂ ಸುಷ್ಮಾ ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀಜಯದೇವ ಹೃದ್ರೋಗ ಆಸ್ಪತ್ರೆ ಬಳಿ ಇರುವ ಸಾಫ್ಟ್ ವೇರ್ ಕಂಪನಿಯಲ್ಲಿ ಇಬ್ಬರು ದುಡಿಯುತ್ತಿರುವಾಗಲೇ ಇಬ್ಬರಿಗೂ ಪ್ರೇಮಾಂಕುರವಾಗಿ ಮದುವೆಯಲ್ಲಿ ಮುಕ್ತಾಯಗೊಂಡಿತ್ತು.
ಸುಷ್ಮಾ ಅವರ ಪೋಷಕರು ಈ ಮದುವೆಗೆ ಒಪ್ಪಿಗೆ ನೀಡಿದ್ದರು ಆದರೆ, ಕಿರಣ್ ಅಪ್ಪ ಅಮ್ಮ ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಮದುವೆ ಸಾಂಗವಾಗಿ ನೆರವೇರಿತ್ತು. ಇಬ್ಬರು ವಿಜಯನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದರು.
ಬೆಂಗಳೂರಿನ ಟ್ರಾಫಿಕ್ ಗೆ ಹೆದರಿ, ಅರಕೆರೆ ಲೇಔಟ್ ನಲ್ಲಿರುವ ತಾಯಿ ಮನೆಯಲ್ಲೇ ಹೆಚ್ಚು ಕಾಲ ಇಬ್ಬರು ಇರುತ್ತಿದ್ದರು.
ಪೊಲೀಸರ ಶಂಕೆ ಯಾರ ಮೇಲೆ?: ಕಳೆದ ವಾರ ದಂಪತಿ ಹೊನ್ನಾವರದ ಕಿರಣ್ ಮನೆಗೆ ಹೋಗಿ ಬಂದಿದ್ದರು. ನಂತರ ಸುಷ್ಮಾ ಸಾವಿಗೆ ಶರಣಾಗಿದ್ದಾಳೆ. ಸುಷ್ಮಾ ಆತ್ಮಹತ್ಯೆಯನ್ನು ಅಸಹಜ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಆದರೆ, ಹೊನ್ನಾವರದಲ್ಲಿ ಏನು ನಡೆಯಿತು ಎಂಬುರ ಬಗ್ಗೆ ತನಿಖೆಯಾದರೆ ಸಾವಿನ ಹಿಂದಿನ ರಹಸ್ಯ ಬಯಲಾಗಲಿದೆ ಎಂದು ಹುಳಿಮಾವು ಪೊಲೀಸ್ ಠಾಣಾಧಿಕಾರಿ ಹೇಳುತ್ತಾರೆ.
ಸುಷ್ಮಾ ಬೇರೆಯವರ ಬೈಗುಳ ಕೇಳಿ ಬೆಚ್ಚಿ ಬೀಳುವಂಥ ಹುಡುಗಿಯೇನಲ್ಲ. ಕಿರಣ್ ಕೂಡಾ ಚೆನ್ನಾಗಿ ನೋಡಿಕೊಂಡಿದ್ದಾನೆ. ಹೊನ್ನಾವರದಿಂದ ಬಂದ ಮೇಲೆ ಏನು ಮಾತನಾಡಲಿಲ್ಲ. ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು ಏನಾಗಿತ್ತು ಎಂಬುದು ತಿಳಿಯುತ್ತಿಲ್ಲ ಎಂದು ಸುಷ್ಮಾ ಪೋಷಕರು ಗೋಳಾಡುತ್ತಿದ್ದಾರೆ.