ಬಯಲು ಚೊಂಬೇಶ್ವರರಿಗೆ ಕಾರವಾರದಲ್ಲಿ ಕಡಿವಾಣ
ಶಾಲಾ-ಕಾಲೇಜು ರಜೆಯ ಹಿನ್ನೆಲೆಯಲ್ಲಿ ಪ್ರತಿದಿನ ನೂರಾರು ಪ್ರವಾಸಿಗರು ಕಾರವಾರ ಕಡಲತೀರಕ್ಕೆ ಭೇಟಿ ನೀಡುತ್ತಿದ್ದು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಪ್ರವಾಸಿಗರು ಈ ರೀತಿ ನಡೆದುಕೊಳ್ಳದಂತೆ ಹಾಗೂ ಸ್ವಚ್ಛತೆ ಕಾಪಾಡಲು ಸೂಚನಾ ಫಲಕಗಳನ್ನು ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ.
ಬಯಲು ಮಲವಿಸರ್ಜನೆಗೆ ಕಡಿವಾಣ : ಕಡಲುತೀರದಲ್ಲಿ ಮಲವಿಸರ್ಜನೆಗೆ ಕಡಿವಾಣ ಹಾಕಲು ಹಾಗೂ ಸ್ವಚ್ಛತೆ ಕಾಪಾಡಲು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಈಗಾಗಲೇ ಕ್ರಮ ಕೈಗೊಂಡಿದ್ದು ನಿಯಂತ್ರಣಕ್ಕೆ ಬೆಳಿಗ್ಗೆ ಇಬ್ಬರು ಪೊಲೀಸ ಕಾನ್ಸ್ಟೇಬಲ್ಗಳನ್ನು ನೇಮಿಸಲಾಗಿದೆ.
ಬೆಳಿಗ್ಗೆ ಎರಡು ಗಂಟೆ ಗಾರ್ಡಗಳು ಕಡಲತೀರದ ಸುತ್ತಲೂ ನಿಗಾವಹಿಸುತ್ತಾರೆ. ನಗರಸಭೆಯ ಕೆಲಸಗಾರರು ಬೆಳಿಗ್ಗೆಯೆದ್ದು ಕಡಲತೀರದಲ್ಲಿ ಕಸ ಕಡ್ಡಿಗಳನ್ನು ಸಂಗ್ರಹಿಸುತ್ತಾರೆ. ಅಲ್ಲದೇ ಇತ್ತೀಚೆಗೆ ಸ್ವಚ್ಛತಾ ಕಾರ್ಯಕ್ರಮ ನಡೆದ ರೀತಿಯಲ್ಲಿ ಕಾರವಾರ ವಿವಿಧ ಸಂಘಸಂಸ್ಥೆಗಳು ಹಾಗೂ ಸ್ಥಳೀಯರು ಸಹ ವಾರಕ್ಕೊಮ್ಮೆಯಾದರೂ ಸ್ವಯಂಪ್ರೇರಣೆಯಿಂದ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಬೇಕಾದ ಅಗತ್ಯವಿದೆ.
ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕಾರವಾರದ ಸಾರ್ವಜನಿಕರು ಕಡಲುತೀರವನ್ನು ವಾಯುವಿಹಾರಕ್ಕೆ ಮಾತ್ರ ಬಳಸಿಕೊಳ್ಳುವುದು ಕಂಡುಬರುತ್ತಿದೆಯಾದರೂ ಸ್ವಚ್ಛತೆಗೋಸ್ಕರ ಗಮನ ನೀಡದೇ ಇರುವುದು ಸಹ ವಿಪರ್ಯಾಸ. ಅದೇನು ನಮ್ಮ ಕೆಲಸವಲ್ಲವೆಂದು ಜಾರಿಕೊಳ್ಳುವ ಮನೋಭಾವ ಹೊಂದಿರುವ ಸಾರ್ವಜನಿಕರು ಸ್ವಚ್ಛತೆಗೆ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವುದು ಕಲಿಯಬೇಕಿದೆ.