ಆಲ್ ಕರ್ನಾಟಕ ಟಿಪ್ಪರ್ ಕಳ್ಳರ ಬಂಧನ
ರಾಜ್ಯಾದ್ಯಂತ ಟಿಪ್ಪರ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಟಿಪ್ಪರ್ ಕಳವು ಮಾಡುತ್ತಿದ್ದವರು ಎಣ್ಣೆಹೊಳೆಯ ಇಕ್ಬಾಲ್ (40) ಮತ್ತು ಗಂಜಿಮಠದ ಇಡ್ಕಾ ಇಬ್ರಾಹಿಂ (29). ಇವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಕಳೆದ 2 ವರ್ಷಗಳಿಂದ ಇವರು ರಾಜ್ಯದ ಹಲವೆಡೆ ಟಿಪ್ಪರ್ ಗಳನ್ನು ಕಳವು ಮಾಡಿ ನಕಲಿ ಆರ್ .ಸಿ.ಯೊಂದಿಗೆ ಮಾರಾಟ ಮಾಡುತ್ತಿದ್ದು, ಕೆಲವು ಸಂದರ್ಭದಲ್ಲಿ ಇನ್ಶೂರೆನ್ಸ್ ಹಣ ವಾಪಸ್ ಪಡೆಯಲು ಟಿಪ್ಪರ್ ಕಳವಾದ ಬಗ್ಗೆ ಸುಳ್ಳು ದೂರನ್ನೂ ನೀಡುತ್ತಿದ್ದರು ಎನ್ನಲಾಗಿದೆ.
ತುಮಕೂರು, ಬಳ್ಳಾರಿ, ಮೈಸೂರು ಮುಂತಾದ ಕಡೆಯಲ್ಲಿ ಇವರು ನಕಲಿ ಆರ್ ಸಿ ಸೃಷ್ಟಿ ಮಾಡುತ್ತಿದ್ದರು. ಅದಕ್ಕೆ ಪೂರಕವಾಗಿ ವಾಹನದ ಇಂಜಿನ್ ಹಾಗೂ ಚಾಸಿಸ್ ನಂಬರನ್ನೂ ಹೊಸದಾಗಿ ಪಂಚ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳೂ ಈ ಜಾಲದಲ್ಲಿ ಶಾಮೀಲಾಗಿರುವ ಶಂಕೆ ಇದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಡೂರಿನ ಹಬೀಬ್, ಕಾರ್ಕಳದ ಸತೀಶ್, ಮೂಡಬಿದಿರೆಯ ಭಾಸ್ಕರ ಮತ್ತು ಹರೀಶ್ ತಲೆಮರೆಸಿಕೊಂಡಿದ್ದಾರೆ. ಇನ್ನೂ ಹಲವು ಆರೋಪಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಇನ್ನೂ ಕನಿಷ್ಠ 20 ಟಿಪ್ಪರ್ ಗಳು ಇದೇ ರೀತಿಯಲ್ಲಿ ಕಳವಾಗಿರುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.