ರತ್ನಾಕರ ಶೆಟ್ಟಿಗೆ ಜಾಮೀನು ಇಲ್ಲ; ಯಾವುದೇ ಕ್ಷಣ ಬಂಧನ
ಲೋಕಾಯುಕ್ತ ದಾಳಿಗೆ ಹೆದರಿ ಸೆಪ್ಟೆಂಬರ್ 7 ರಂದು ಕಾನ್ಸ್ಟೆಬಲ್ ಶೋಯಲನನ್ನೂ ಜತೆಗೆಳೆದುಕೊಂಡು ಇಲಾಖೆಯ ವಾಕಿಟಾಕಿಯೊಂದಿಗೆ ಪರಾರಿಯಾಗಿದ್ದ ಶೆಟ್ಟಿ ಬಂಧನ ನಿರೀಕ್ಷಣಾ ಜಾಮೀನು ಕೋರಿ ಕಳೆದ ವಾರ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ಅರ್ಜಿಯನ್ನು ಸೋಮವಾರ ತಿರಸ್ಕರಿಸಿದ್ದು, ಶೆಟ್ಟಿ ಮತ್ತು ಶೋಯಲ್ ಯಾವುದೇ ಕ್ಷಣ ಬಂಧನಕ್ಕೊಳಗಾಗುವ ಅಂದಾಜಿದೆ.
ಶಿವಾಜಿ ನಗರದ ಹೊಲಿಗೆ ಯಂತ್ರದ ಅಂಗಡಿ ಮಾಲೀಕರೊಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇವರಿಬ್ಬರೂ ಲೋಕಾಯುಕ್ತ ದಾಳಿಯ ಸುಳಿವು ಅರಿತು ಅಮೃತಹಳ್ಳಿ ಠಾಣೆಯಿಂದ ಕಳ್ಳರಂತೆ ಪರಾರಿಯಾಗಿದ್ದರು.
ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ ಲಂಚಕ್ಕೆ ಒತ್ತಾಯಿಸಿದ್ದ ಬಗ್ಗೆ ಮಹತ್ವದ ಸಾಕ್ಷ್ಯ ಸಂಗ್ರಹಿಸಿದ್ದರು. ಹೊಲಿಗೆ ಯಂತ್ರದ ಅಂಗಡಿ ಮಾಲೀಕನನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ದೌರ್ಜನ್ಯ ನಡೆಸಿರುವ ಬಗ್ಗೆ ಠಾಣೆಯ ಸಿಬ್ಬಂದಿ ಸಾಕ್ಷ್ಯ ನುಡಿದಿದ್ದರು.