ಕಳ್ಳ ಪೂಜಾರಿಯ ಹಿಡಿದ ಜಾಣ ಪೊಲೀಸರು
ಗುಲಸಿಂದ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಅರ್ಚಕ ಜಗದೀಶ್ ಎಂಬುವನೇ ಬಂಧಿತ ಆರೋಪಿ. ಈತ ಭಕ್ತಾದಿಗಳು ದೇವರಿಗೆ ನೀಡಿದ ಕಾಣಿಕೆ ಒಡವೆಗಳನ್ನು ಕಳವು ಮಾಡಿ ಬೇರೆಯವರು ಕಳವು ಮಾಡಿದ್ದಾರೆ ಎಂದು ನಂಬಿಸಲು ಹೋಗಿ ಆತನೇ ಸಿಕ್ಕಿ ಬಿದ್ದಿದ್ದಾನೆ.
ಆರೋಪಿ ಜಗದೀಶ್ ಶುಕ್ರವಾರ ರಾತ್ರಿ 12 ಗಂಟೆ ಸಮಯದಲ್ಲಿ ದೇವಸ್ಥಾನದ ಬಾಗಿಲು ತೆರೆದು ದೇವರಿಗೆ ಹಾಕಿದ್ದ 83 ಗ್ರಾಂ ಒಡವೆಗಳನ್ನು ಕಳವು ಮಾಡಿ ತನ್ನ ಮನೆಯಲ್ಲಿಟ್ಟು, ಆತನೇ ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಕಳ್ಳರು ದೇವಸ್ಥಾನ ನುಗ್ಗಿ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದಾರೆ ಎಂದು ಗ್ರಾಮಸ್ಥರಿಗೆ ನಂಬಿಸಲು ಯತ್ನಿಸಿದ್ದಾನೆ.
ಈ ಬಗ್ಗೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಶ್ವಾನದೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಶ್ವಾನವು ದೇವಸ್ಥಾನದಿಂದ ನೇರವಾಗಿ ಅರ್ಚಕನ ಮನೆಗೆ ಹೋಗಿದೆ. ಆನಂತರ ಪೊಲೀಸರು ಅರ್ಚಕ ಜಗದೀಶನನ್ನು ವಿಚಾರಣೆ ನಡೆಸಿದಾಗ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಸರ್ಕಲ್ ಇನ್ಸ್ಪೆಕ್ಟರ್ ಎ.ಮಾರಪ್ಪ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದು, ಪಟ್ಟಣ ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.