ಪೊಲೀಸ್ ವೈಫಲ್ಯ ಕಾರಣ: ಏಟು ತಿಂದ ಸೋಮಣ್ಣ
ಚಪ್ಪಲಿ ಸೇವೆ ಮಾಡಿಸಿಕೊಂಡು ಘಾಸಿಗೊಂಡಿರುವ ಸೋಮಣ್ಣ ಘಟನೆಯ ಬಗ್ಗೆ ಹೀಗೆನ್ನುತ್ತಾರೆ: ನಾನು ಅಧಿಕಾರಿಗಳ ಸಭೆ ನಡೆಸಿ ಸಮಿತಿ ಕೊಠಡಿಯಿಂದ ಹೊರ ಬಂದಾಗ ಈ ಘಟನೆ ನಡೆಯಿತು. ಆತನನ್ನು ನಾನು ನೋಡಿದ್ದು ಇದು ಎರಡನೇ ಬಾರಿ. ಹಿಂದೆ ಯಾವುದೋ ಶಿಫಾರಸು ಪತ್ರಕ್ಕಾಗಿ ನನ್ನ ಬಳಿಗೆ ಬಂದಿದ್ದ.
ಇಂದು ನಾನು ವಿಚಾರಣೆ ಮಾಡುವ ಮೊದಲೇ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ. ಇದಕ್ಕೆ ಪೊಲೀಸರ ವೈಫಲ್ಯ ಕಾರಣ. ಈತನ ಪೂರ್ವಾಪರ ವಿಚಾರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಘಟನೆಗೆ ಕಾರಣ ತಿಳಿಯಬೇಕಾಗಿದೆ.
ಪಕ್ಷದಲ್ಲಿ ಹೊಸಬರು, ಹಳಬರು ಎಂಬ ಯಾವುದೇ ವಿವಾದವಿಲ್ಲ. ಆತ ಬಿಜೆಪಿ ಕಚೇರಿಯಿಂದಲೇ ಪಾಸ್ ಸಹ ಪಡೆದು ಬಂದಿದ್ದಾನೆ. ಗೃಹ ಮಂತ್ರಿ ಅಶೋಕ್ ಇದುವರೆಗೂ ನನ್ನ ಬಳಿ ಚರ್ಚಿಸಿಲ್ಲ. ಆಡಳಿತದಲ್ಲಿ ಅರಾಜಕತೆ ಇದೆ ಎಂಬುದನ್ನು ನಾನು ಒಪ್ಪುವುದಿಲ್ಲ.
ಪೊಲೀಸ್ ವೈಫಲ್ಯವಲ್ಲ: ಈ ಮಧ್ಯೆ, ಘಟನೆ ಬಗ್ಗೆ ಮೂಕಪ್ರೇಕ್ಷಕರಾಗಿರುವ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಸಾಹೇಬರು ಏನನ್ನುತ್ತಾರೋ ನೋಡಿ: ಈ ಪ್ರಕರಣ ಪೊಲೀಸರ ವೈಫಲ್ಯವೇನೂ ಅಲ್ಲ, ಸಚಿವ ಸೋಮಣ್ಣ ಅವರು ಯಾವ ಕಾರಣಕ್ಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ನಮಗೂ ಈ ಘಟನೆ ಬೇಸರ ತರಿಸಿದೆ. ಬೇರೆ ಬೇರೆ ದೇಶಗಳಲ್ಲಿ, ಗಣ್ಯರ ಮೇಲೂ ಇಂತಹ ಘಟನೆಗಳು ನಡೆದಿವೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.