ಗಾಂಧಿನಗರ ಕಾರ್ಪೊರೇಟರ್ ನಟರಾಜ್ ಭೀಕರ ಹತ್ಯೆ
ಮಾರುತಿ ಓಮ್ನಿಯಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಹೋಗುತ್ತಿದ್ದ ನಟರಾಜ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ರಸ್ತೆ ಮೇಲೆ ಬಿದ್ದ ನಟರಾಜ್ ಅವರನ್ನು ಅಟ್ಟಾಡಿಸಿಕೊಂಡು ಕೊಚ್ಚಿಹಾಕಿದ್ದಾರೆ. ನಟರಾಜ್ ಅವರ ಕತ್ತು, ಬೆನ್ನು ಮತ್ತು ಎದೆಯ ಮೇಲೆ ಆಳವಾದ ಗಾಯಗಳಾಗಿದ್ದವು. ಅವರು ಮಲ್ಲಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೂಡಲೆ ನಟರಾಜ್ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ 12.20ರ ಸುಮಾರಿಗೆ ಮಲ್ಲಿಗೆ ನರ್ಸಿಂಗ್ ಹೋಮ್ ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಟರಾಜ್ ಅವರು ಮೃತರಾದರು. ಹಲ್ಲೆ ಮಾಡಿದ್ದಕ್ಕೆ ಕಾರಣ ತಿಳಿದುಬಂದಿಲ್ಲ. ನಟರಾಜ್ ಅವರ ದೇಹವನ್ನು ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ.
ನಟರಾಜ್ ಅವರ ಸಹೋದ್ಯೋಗಿಗಳ ಪ್ರಕಾರ, ಸಜ್ಜನರಾಗಿದ್ದ ನಟರಾಜ್ ಅವರಿಗೆ ಯಾರ ವಿರುದ್ಧವೂ ವೈಷಮ್ಯ ಇರಲಿಲ್ಲ. ಮೃತರು ಕಾಂಗ್ರೆಸ್ ಯುವ ನಾಯಕ ದಿನೇಶ್ ಗುಂಡೂರಾವ್ ಅವರ ಹಿಂಬಾಲಕರಾಗಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದು, ನಿಖರ ಕಾರಣ ತಿಳಿದುಕೊಳ್ಳಲು ಅನೇಕರ ವಿಚಾರಣೆ ನಡೆಸುತ್ತಿದ್ದಾರೆ.