ಶೋಭಾ-ರಾಮದಾಸ್ ಭಿನ್ನಮತಕ್ಕೆ ದಸರಾ ವೇದಿಕೆ
ದಸರಾ ವಸ್ತು ಪ್ರದರ್ಶನ ಮತ್ತು ಆಹಾರ ಮೇಳದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬರುವ ಮೊದಲು ಶೋಭಾ ಕರಂದ್ಲಾಜೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜೊತೆಗೆ ಆಹಾರ ಮೇಳ ಉದ್ಘಾಟನೆಯನ್ನು ದೋಸೆ ಹಾಕುವ ಮೂಲಕ ಉದ್ಘಾಟಿಸಿದರು.
ಇದನ್ನು ದೂರದಿಂದ ಕಂಡ ಸಚಿವ ರಾಮದಾಸ್ ಗೆ ಹೊಟ್ಟೆಯಲ್ಲಿ ಹುಣಸೆ ಹಣ್ಣು ಕಿವಚಿದಂತ್ತಾಗಿದೆ. ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿದ್ದರಿಂದ ಆಹಾರ ಮೇಳ ಕಾರ್ಯಕ್ರಮದ ವೇದಿಕೆಯಲ್ಲಿ ಒಬ್ಬರೇ ಕುಳಿತುಕೊಂಡಿದ್ದರು. ಜಿ.ಪಂ. ಸಿಇಓ ಸತ್ಯವತಿ ಹಾಗೂ ಆಹಾರ ಇಲಾಖೆ ಉಪನಿರ್ದೇಶಕಿ ಕುಮುದ ಗಿರೀಶ್ ಅವರು ಸಚಿವರ ಕೋಪ ತಣ್ಣಗೆ ಮಾಡಿ ಮತ್ತೊಮ್ಮೆ ಸಚಿವರ ಕೈಯಲ್ಲಿ ದೋಸೆ ಹಾಕಿಸಿ ಮತ್ತೊಮ್ಮೆ ಉದ್ಘಾಟನೆ ಮಾಡಿದರು.
ನಂತರ ವಸ್ತು ಪ್ರದರ್ಶನ ಉದ್ಘಾಟನಾ ಸಂದರ್ಭದಲ್ಲಿ ಇದು ವಿಕೋಪಕ್ಕೆ ಹೋಯಿತು. ರಾಮದಾಸ್ ಅವರನ್ನು ಉದ್ಘಾಟನೆಗೆ ಕರೆಯದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ ಕೆ.ಆರ್.ಕ್ಷೇತ್ರದ ಕಾರ್ಯಕರ್ತರು ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬಿಸಿ ತಟ್ಟಿದ್ದು ಅಧಿಕಾರಿಗಳಿಗೆ: ವಸ್ತು ಪ್ರದರ್ಶನ ಆವರಣದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಏರ್ಪಡಾಗಿತ್ತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಅವರು ವಿದೇಶದಲ್ಲಿದ್ದಾರೆ. ರಾಮದಾಸ್ ಅವರು ಬರುವುದು ತಡವಾದ್ದರಿಂದ 6 ಗಂಟೆ ವೇಳೆಗೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಿದರು ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧಿಕಾರಿ ಬಿಪಿ ಮಂಜುನಾಥ್ ಹೇಳಿದ್ದು ರಾಮದಾಸ್ ಬೆಂಬಲಿಗರ ಕಿವಿಗೆ ಬೀಳಲಿಲ್ಲ.
ಶೋಭಾಕರಂದ್ಲಾಜೆ ಅವರಿಗೆ ಘೇರಾವ್ ಮಾಡಲು ವಸ್ತು ಪ್ರದರ್ಶನದ ಆವರಣದ ಗೇಟಿನ ಮುಂಭಾಗಕ್ಕೆ ಬಂದಿದ್ದ ರಾಮದಾಸ್ ಬೆಂಬಲಿಗರ ಕೈಗೆ ಸಿಗದಂತೆ ಶೋಭಾ ಅವರು ಮತ್ತೊಂದು ಮಾರ್ಗದಲ್ಲಿ ಎಸ್ಕೇಪ್ ಆಗಿದ್ದರು. ಅಲ್ಲಿಂದ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ರಾಮದಾಸ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.