ಜರ್ಮನಿಗೆ ಹೊರಟಿತು ಬಳ್ಳಾರಿ ತೊಗಲುಗೊಂಬೆ ಮೇಳ
ಬುಧವಾರ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಬೆಳಗಲ್ಲು ವೀರಣ್ಣ ಅವರು, ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ಇರುವ ಲಿಂಡೆನ್ ಮ್ಯೂಸಿಯಂನ ಅಸಿಸ್ಟೆಂಟ್ ಕ್ಯುರೇಟರ್ ಸುಸಾನ್ ಫಾಲರ್ ಅವರ ಅಹ್ವಾನದ ಮೇರೆಗೆ ತಮ್ಮ ನೇತೃತ್ವದ ತಂಡವು ಜರ್ಮನಿಗೆ ತೆರಳುತ್ತಿದೆ. ತಂಡವು ಅ. 6ರಂದು ಪ್ರವಾಸ ಪ್ರಾರಂಭಿಸುತ್ತಿದೆ ಎಂದರು.
ಅ. 9ರಂದು ಲಿಂಡೆನ್ ಮ್ಯೂಸಿಯಂನ ಸಭಾಂಗಣ ಸ್ಟುಟ್ಗಾರ್ಟ್ನಲ್ಲಿ ರೂಪಕ ಪ್ರದರ್ಶನ, ಅ. 10ರಂದು ಇಂಡೊ-ಜರ್ಮನ್ ಸೊಸೈಟಿ ಆಯೋಜಿಸಿರುವ ನ್ಯುರುಂಬರ್ಗ್ ನಲ್ಲಿ ಪ್ರದರ್ಶನಗಳನ್ನು ನೀಡಲಿದೆ. ಅ. 11ರಿಂದ 14ರವರೆಗೆ ಈ ತಂಡವು ನ್ಯುರುಂಬರ್ಗ್ನಲ್ಲಿ ವಾಸ್ತವ್ಯ ಮಾಡಲಿದೆ ಎಂದು ಹೇಳಿದರು.
ಅ. 15ರಂದು ಕೊಲ್ನ್ ನಗರದಲ್ಲಿ, ಅ. 16ರಂದು ಮೇಂಜ್ ನಗರದಲ್ಲಿ ಇಂಡೋ-ಜರ್ಮನ್ ಸೊಸೈಟಿ ಆಯೋಜಿಸಿರುವ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳವು ಪ್ರದರ್ಶನಗಳನ್ನು ಪ್ರದರ್ಶಿಸಲಿದೆ. ಕಲಾವಿದರು, ಕಲಾಭಿಮಾನಿಗಳ ಶ್ರೀರಕ್ಷೆಯಿಂದಲೇ ತಮ್ಮ ರೂಪಕಗಳ ಪ್ರದರ್ಶನ ನಡೆಯುತ್ತಿದೆ ಎಂದು ಅವರು ಹೇಳಿದರು.
ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದ ಸದಸ್ಯೆ ಮಹಾಲಿಂಗಮ್ಮ ಬೆಳಗಲ್ಲು ವೀರಣ್ಣ, ಬಿ.ಕೆ. ಮಹೇಶ್, ಬಿ.ವಿ. ಮಲ್ಲಿಕಾರ್ಜುನ, ಬಿ.ವಿ. ಪ್ರಕಾಶ್, ಬಿ.ವಿ. ಹನುಮಂತ, ಎರ್ರಿಸ್ವಾಮಿ, ಕೆ. ಹೊನ್ನುರುಸ್ವಾಮಿ, ಬೆಳಗಲ್ಲು ಪ್ರಕಾಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.