20 ಸಾವಿರ ತುರ್ತು ಚಿಕಿತ್ಸಾ ಕರೆಗಳ ಕೇಳುವವರಿಲ್ಲ
ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಮತ್ತು ಎಲ್ಲ ಸೌಕರ್ಯಗಳನ್ನು ಒದಗಿಸಬೇಕು ಎಂಬಿತ್ಯಾದಿ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿವಿಕೆ ಎಮರ್ಜೆನ್ಸಿ ಮ್ಯಾನೇಜ್ ಮೆಂಟ್ ಅಂಡ್ ರಿಸರ್ಚ್ ಇನ್ ಸ್ಟಿಟ್ಯೂಟ್ ಗೆ ಸೇರಿದ ಆಂಬುಲನ್ಸ್ ನೌಕರರು ನಿರಶನಕ್ಕೆ ಕುಳಿತಿದ್ದಾರೆ.
ನಾಲ್ಕು ಬೇಡಿಕೆಗಳಲ್ಲಿ ಒಂದೆರಡನ್ನು ಪೂರೈಸುವುದಾಗಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ವಾಗ್ದಾನ ನೀಡಿದ್ದರೂ ಆಂಬುಲನ್ಸ್ ನೌಕರರು ಕೇಳಲು ತಯಾರಿಲ್ಲ. ಕೊಪ್ಪಳ ಉಪಚುನಾವಣೆ ಗೆಲುವಿನಲ್ಲಿ ಬೀಗುತ್ತಿರುವ ಸದಾನಂದ ಗೌಡರಿಗೆ ನೌಕರರ ಅಳಲು ಕೇಳಲು ಸಮಯವಿಲ್ಲ.
ಆರೋಗ್ಯ ಕವಚ ಕಾರ್ಯಕ್ರಮದಡಿ ತುರ್ತು ಸೇವೆ ಸಲ್ಲಿಸುತ್ತಿರುವ ಜಿವಿಕೆ ಎಮರ್ಜೆನ್ಸಿ ಮ್ಯಾನೇಜ್ ಮೆಂಟ್ ಅಂಡ್ ರಿಸರ್ಚ್ ಇನ್ ಸ್ಟಿಟ್ಯೂಟ್ ನ ಗುತ್ತಿಗೆ ಕಾರ್ಮಿಕರಾಗಿ ಆಂಬುಲನ್ಸ್ ನೌಕರರು ಕೆಲಸ ಮಾಡುತ್ತಿದ್ದಾರೆ. ಬೇಡಿಕೆಗಳನ್ನು ಪೂರೈಸುವಂತೆ ಆರೋಗ್ಯ ಕಾರ್ಯದರ್ಶಿ ಡಾ. ಇವಿ ರಮಣ ರೆಡ್ಡಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನೌಕರರ ಬೇಡಿಕೆ ಸರಿಯಾದದ್ದಾದರೂ, ರಾಜ್ಯದಾದ್ಯಂತ ರೋಗಿಗಳು ಸಕಾಲದಲ್ಲಿ ತುರ್ತು ಚಿಕಿತ್ಸೆ ದೊರೆಯದೆ ಪರದಾಡುವಂತಾಗಿದೆ. ಮೇಲಾಗಿ, ಇಂದು ವಿಶ್ವ ಹೃದಯ ದಿನ. 108 ಆಂಬುಲನ್ಸ್ ಉಚಿತ ಸೇವೆ ಪಡೆಯುವವರಲ್ಲಿ ಬಡವರೇ ಜಾಸ್ತಿ. ಈಗ, ಖಾಸಗಿ ಆಸ್ಪತ್ರೆಗಳ ದುಬಾರಿ ಆಂಬುಲನ್ಸ್ ಸೇವೆ ಪಡೆಯದೆ ಗತ್ಯಂತರವೇ ಇಲ್ಲದಂತಾಗಿದೆ.