ಬೇಲೆಕೇರಿ ಬಂದರಿನಲ್ಲಿ ಸಿಬಿಐಗೆ ಸಿಕ್ಕಿದ್ದೇನು?
ಸಿಇಸಿ ಕಲೆ ಹಾಕಿರುವ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ, ಶಾಸಕ ಬಿ.ನಾಗೇಂದ್ರ ಮತ್ತು ಸುರೇಶ್ ಬಾಬು ಅವರ ಡೆಕನ್ ಮೈನಿಂಗ್ ಅಸೋಸಿಯೇಟ್ಸ್ ಹಾಗೂ ಜನಾರ್ದನ ರೆಡ್ಡಿ ಅವರ ಓಬಳಾಪುರಂ ಮೈನಿಂಗ್ ಕಂಪನಿ ಸಂಬಂಧಗಳನ್ನು ಹೊರ ಹಾಕಲಾಗಿದೆ.
ಅಧಿಕಾರಿಗಳಿಗೆ ಬಂತು ಕುತ್ತು: ಸಿಇಸಿ ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಸೂಕ್ತವಾಗಿ ತನಿಖೆ ನಡೆಸಲಾಗುವುದು, ರೆಡ್ಡಿಗಳಿಗೆ ಸಹಕರಿಸಿದ ಅಧಿಕಾರಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿಬಿಐ(ಹೈದರಾಬಾದ್) ಜಂಟಿ ನಿರ್ದೇಶಕ ವಿವಿ ಲಕ್ಷ್ಮಿ ನಾರಾಯಣ ಹೇಳಿದ್ದಾರೆ.
ಕಬ್ಬಿಣದ ಅದಿರುಗಳನ್ನು ಲಾರಿಗಳಲ್ಲಿ ತುಂಬಿ ಕಾರವಾರದ ಬಂದರು ಮೂಲಕ ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ರೆಡ್ಡಿಗಳಿಗೆ ಸರ್ಕಾರದ ನೀತಿ ಭಾರಿ ಪೆಟ್ಟುಕೊಟ್ಟಿತ್ತು. ಅದಿರು ರಫ್ತು ನಿಷೇಧದಿಂದ ಕಂಗಾಲಾಗಿದ್ದ ರೆಡ್ಡಿ ಕಂಪನಿ, ಅಪಾರ ಪ್ರಮಾಣದ ಅದಿರನ್ನು ಬಚ್ಚಿಡಲಾಗದೆ, ಹಿಂದಕ್ಕೆ ತೆಗೆದುಕೊಳ್ಳಲಾಗದೆ ಒದ್ದಾಡುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿತ್ತು.
ಆದರೆ, ಇದರಿಂದ ಯಾವುದೇ ಪರಿಣಾಮವಾಗಿರಲಿಲ್ಲ. ಈಗ ಸಿಬಿಐ ತಂಡ ಮಂಗಳೂರು, ಕಾರವಾರ ಹಾಗೂ ಬೇಲಿಕೇರಿ ಬಂದರುಗಳನ್ನು ಸುತ್ತಿ ಮಾಹಿತಿ ಸಂಗ್ರಹಿಸುತ್ತಿದೆ. ಅಗತ್ಯ ಬಿದ್ದರೆ ವಿಚಾರಣೆಗಾಗಿ ಬಂದರು ಅಧಿಕಾರಿಗಳನ್ನು ಬಂಧಿಸುವ ಸಾಧ್ಯತೆಯೂ ಇದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.