ಇಲ್ಲಿ ಹೆಜ್ಜೆಹೆಜ್ಜೆಗೂ ಒಂದು ಜೋಗದ ಗುಂಡಿ
ತುಮಕೂರಿನಿಂದ ಸಾಗರದವರೆಗೆ ರಸ್ತೆಯ ಗುಣಮಟ್ಟ ಮತ್ತು ಪ್ರವಾಸ ಹಾಗೂ ಹೀಗೂ ಪರವಾಗಿಲ್ಲ. ಆದರೆ, ಸಾಗರದಿಂದ ಹೊನ್ನಾವರ ನಡುವಿನ 75 ಕಿಲೋಮೀಟರ್ ರಸ್ತೆ ನರಕ ಸದೃಶ. ಈ ರಸ್ತೆಯಲ್ಲಿ ಪ್ರಯಾಣಿಸುವರ ಸೊಂಟ, ಹೆಗಲು, ಎಲಬುಗಳನ್ನು ಇಡಗುಂಜಿ ಗಣಪತಿಯೇ ಕಾಪಾಡಬೇಕು.
ಅಕ್ಕ ಪಕ್ಕ ನಿತ್ಯ ಹಸುರು ಕಾನನ ಮತ್ತು ಜಲಪಾತಗಳ ಜುಳುಜುಳು ಆಲಿಸುತ್ತ ಈ 75 ಕಿಮಿ ಉದ್ದದ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದೇನೋ ಆನಂದ. ಆದರೆ ರಸ್ತೆ ಮಾತ್ರ ಡಬ್ಬಾ. ಹೆಜ್ಜೆ ಹೆಜ್ಜೆಗೂ ಒಂದೊಂದು ಜೋಗದ ಗುಂಡಿ. ರಾಜಾ ರಾಣಿ ರೋರರ್ ರಾಕೆಟ್.
ಮುಖ್ಯವಾಗಿ ಈ ರಸ್ತೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಹಾದಿ. ಸರಕಾರದ ಕರಪತ್ರಗಳಲ್ಲಿ, ಸ್ವಾಗತಕೋರುವ ಭಿತ್ತಿಫಲಕಗಳಲ್ಲಿ ಶಿವಮೊಗ್ಗ ಜಿಲ್ಲೆಯ ವೈಭವವನ್ನು ದಪ್ಪಕ್ಷರಗಳಲ್ಲಿ ಬಿಂಬಿಸಲಾಗಿರುತ್ತದೆ. ಶುದ್ಧ ನಗೆಪಾಟಲು. ಸ್ವಲ್ಪ ಸುತ್ತು ಬಳಸು ಆದರೂ ಪರವಾಗಿಲ್ಲ. ನೀವು ಮಾತ್ರ ಈ ರಸ್ತೆಯನ್ನು ಬಿಟ್ಟು ಬೇರೆ ಯಾವುದಾದರೂ ಮಾರ್ಗ ಹುಡುಕಿಕೊಳ್ಳಿ.
ಈ ದುರವಸ್ಥೆಯನ್ನು ಸರಿಪಡಿಸುವವರು ಯಾರು? ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಚುರುಕು ಮುಟ್ಟಿಸುವವರು ಯಾರು? ಇವತ್ತಿನಿಂದಲೇ ರಸ್ತೆ ರಿಪೇರಿ ಆರಂಭಿಸಿದರೂ ಮುಂದಿನ ಮಳೆಗಾಲದವರೆಗೂ ಪೂರ್ಣವಾಗುವ ಯೋಜನೆ ಇದಲ್ಲ. ಅಂದಹಾಗೆ ಈ ರಸ್ತೆಗೆ ರಿಪೇರಿ ಮಾಡಿ ಪ್ರಯೋಜನವಿಲ್ಲ. ಹೊಸ ರಸ್ತೆಯೇ ಆಗಬೇಕು.
ನಮ್ಮ ಸಲಹೆ ಏನೆಂದರೆ, ಈ ರಸ್ತೆಯ ಗುಣಮಟ್ಟ ಸುಧಾರಣೆಗೆ ಸಾಗರ, ಹೊನ್ನಾವರ, ಶಿವಮೊಗ್ಗ, ಭಟ್ಕಳ ಜಿಲ್ಲೆಯ ಮಾಧ್ಯಮ ಮಿತ್ರರು ಸಂಬಂಧಪಟ್ಟ ಅಧಿಕಾರಿಗಳನ್ನು ಬಡಿದೆಬ್ಬಿಸುವ ಸುದ್ದಿ ಸಮಾಚಾರಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಹಕ್ಕೊತ್ತಾಯ ಮಾಡಬೇಕು. ವಂದನೆಗಳು.