ಮದ್ವೆ ಆಸೆ ನಾಶವಾಯ್ತು, ನೇಣಿಗೆ ಕೊರಳು ಬಿತ್ತು
ಶೃಂಗೇರಿಯ ಕಿಗ್ಗಾ ಗ್ರಾಮದ ಭಾಗ್ಯ ಪ್ರೇಮಕ್ಕೆ ಬೆಲೆ ಸಿಗದೆ ಸಾವಿನಲ್ಲಿ ಸುಖ ಕಂಡಿದ್ದಾಳೆ. ಒಂದಲ್ಲ, ಎರಡಲ್ಲ ಐದು ವರ್ಷಗಳ ಕಾಲ ಜೊತೆಗಿದ್ದ ಗೆಳೆಯ, ಇನ್ನೊಂದು ಮದುವೆ ಮಾಡಿಕೊಂಡಿರುವ ಸಣ್ಣ ಸುಳಿವು ಸಿಗದೆ ಭಾಗ್ಯ ತನ್ನ ದೌರ್ಭಾಗ್ಯವ ನೆನೆದು ಕಣ್ಣೀರಿನೊಂದಿಗೆ ಇಹಲೋಕದ ಪ್ರೇಮ ವ್ಯಾಪಾರ ಮುಗಿಸಿದ್ದಾಳೆ.
ದೌರ್ಭಾಗ್ಯ ಪ್ರೇಮ್ ಕಹಾನಿ : ಭಾಗ್ಯಳಿಗೆ ಗುರುದತ್ ಪರಿಚಯವಾಗಿ ಇಬ್ಬರು ಶರಾವತಿ ನಗರಕ್ಕೆ ಬಂದು ನೆಲೆಸಿದ್ದರು. ನಮ್ಮಬ್ಬಿರದು ಲಿವ್ ಇನ್ ಟುಗೆದರ್ ಸಂಬಂಧ ಎಂಬಂತೆ ಐದು ವರ್ಷಗಳ ಕಾಲ ಯಾವುದೇ ಕಷ್ಟವಿಲ್ಲದೆ ಇದ್ದರು.
ಅದರೆ, ಇತ್ತೀಚೆಗೆ ತಾನು ಕಟ್ಟಿಕೊಂಡವಳು ಅಲ್ಲ ಇಟ್ಟುಕೊಂಡವಳು ಅಲ್ಲ ಎಂಬ ಸತ್ಯ ಭಾಗ್ಯಳಿಗೆ ಹೇಗೋ ತಿಳಿಯಿತು. ಈ ಬಗ್ಗೆ ಗುರುದತ್ತನನ್ನು ಪ್ರಶ್ನಿಸಿದಾಗ, ಮತ್ತೊಬ್ಬಳನ್ನು ಮದುವೆಯಾಗಿ ಮಗು ಹೊಂದಿರುವುದನ್ನು ಒಪ್ಪಿಕೊಂಡಿದ್ದನು.
ಆದರೂ ಧೈರ್ಯಗೆಡದೆ, ನನ್ನನು ಮದುವೆಯಾಗು ಎಂದು ಭಾಗ್ಯ ಕೇಳಿದ್ದಾಳೆ. ಇದಕ್ಕೊಪ್ಪದೆ ಆಕೆಯನ್ನು ನಿಂದಿಸಿ, ಗುರುದತ್ತ ಹೊರ ನಡೆದಿದ್ದಾನೆ.
ಹೆತ್ತವರನ್ನು ಬಿಟ್ಟು ಬಂದ ಬೇಸರ, ಕೈ ಹಿಡಿಯುತ್ತಾನೆ ಎಂಬ ಆಸೆಯೂ ಇಲ್ಲದೆ ಹೋದಾಗ ಮನೆ ಬಾಗಿಲನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು 'ನನ್ನ ಸಾವಿಗೆ ಗುರುದತ್ ಮೋಸ ಮಾಡಿದ್ದೇ ಕಾರಣ' ಎಂದಿದ್ದಾಳೆ.
ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸಿ, ಗುರುದತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.