ಕಸದ ತೊಟ್ಟಿ ಪಾಲಾದ ರಾಧಾಕೃಷ್ಣನ್ ಫೋಟೋ
ಸರ್ವಕಾಲ ಶಿಕ್ಷಕರಿಂದ ಗೌರವಕ್ಕೆ ಪಾತ್ರರಾಗಬೇಕಿದ್ದ ಶಿಕ್ಷಣತಜ್ಞ ಪ್ರೊ. ರಾಧಾಕೃಷ್ಣನ್ ಅವರ ಭಾವಚಿತ್ರ ಶಿಕ್ಷಣ ಸಂಸ್ಥೆಯಿಂದಲೇ ಕಸದ ತೊಟ್ಟಿ ಪಾಲಾಗಿ ಅವಮಾನಿತವಾದ ಘಟನೆ ಯಾದಗಿರಿಯಲ್ಲಿ ಸೋಮವಾರ ನಡೆದಿದೆ. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಯಲ್ಲಿಯೇ ಶಿಕ್ಷಣತಜ್ಞನಿಗೆ ಅವಮಾನವಾಗಿದೆ.
ನ್ಯೂ ಕನ್ನಡ ಜ್ಯೂನಿಯರ್ ಕಾಲೇಜಿಗೆ ಸೇರಿದ್ದ ಭಾರತದ ಮೊದಲ ಉಪರಾಷ್ಟ್ಪಪತಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಇಂಥ ದುರ್ಗತಿ ಬಂದಿತ್ತು. ಒಣಗಿದ ಎಲೆಗಳ ನಡುವೆ ಗ್ಲಾಸ್ ಒಡೆದು ನೆಲದ ಮೇಲೆ ಭಾವಚಿತ್ರ ಬಿದ್ದಿತ್ತು.
ಇದನ್ನು ಗಮನಿಸಿದ ಅನ್ಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್ ರಘುನಾಥ ರೆಡ್ಡಿ ಗಮನಕ್ಕೆ ತಂದಿದ್ದಾನೆ. ಇದರ ಬಗ್ಗೆ ನಮಗೇನೂ ಗೊತ್ತಿಲ್ಲ, ಫೋಟೋಗೆ ಅವಮಾನ ನಮ್ಮಿಂದಾಗಿಲ್ಲ ಎಂಬ ಹಾರಿಕೆಯ ಉತ್ತರ ರೆಡ್ಡಿ ಕೊಟ್ಟಿದ್ದಾರೆ. ಆದರೆ, ಫೋಟೋ ಹಿಂದುಗಡೆ NKJ College ಎಂದು ಸ್ಪಷ್ಟವಾಗಿ ಬರೆದಿತ್ತು.
ವಿದ್ಯಾರ್ಥಿಗಳು ಮತ್ತು ಪ್ರಿನ್ಸಿಪಾಲ್ ನಡುವೆ ಮಾತಿನ ಚಕಮಕಿ ನಡೆದು ಕೊನೆಗೂ ಆ ಫೋಟೋ ಮತ್ತೆ ನ್ಯೂ ಕನ್ನಡ ಜ್ಯೂನಿಯರ್ ಕಾಲೇಜಿನ ಗೋಡೆ ಅಲಂಕರಿಸಿದೆ. ಮತ್ತೆ ರಾಧಾಕೃಷ್ಣನ್ ಭಾವಚಿತ್ರಕ್ಕೆ ಇಂತಹ ದುರ್ಗತಿ ಬಾರದಿರಲಿ.