ತೆಲಂಗಾಣ ಎಫೆಕ್ಟ್: ಬೆಂಗ್ಳೂರಲ್ಲಿ ಆಗಾಗ ಕತ್ತಲೆ ಕತ್ತಲೆ
ತೆಲಂಗಾಣ ಬಂದ್ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಅಡಚಣೆಯಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 1, 3 ಮತ್ತು 8 ನೇ ಘಟಕಗಳಿಗೆ ಇಂಧನ ಪೂರೈಕೆಯಾಗಿಲ್ಲ. 7 ನೇ ಘಟಕದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವುದರಿಂದ ರಾಜ್ಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ತೆಲಂಗಾಣ ಹೋರಾಟಕ್ಕೆ ಬೆಂಬಲಿಸಿ ಸಿಂಗರೇಣಿ ಕಲ್ಲಿದ್ದಿಲು ಗಣಿ ಕಾರ್ಮಿಕರು ಮುಷ್ಕರ ಮುಂದುವರೆಸಿದ್ದು, ವಾರದಲ್ಲಿ ಮುಷ್ಕರ ಅಂತ್ಯಗೊಳ್ಳದಿದ್ದರೆ ಆರ್ಟಿಪಿಎಸ್ನಲ್ಲಿ ಸಂಗ್ರಹವಿರುವ ಕಲ್ಲಿದ್ದಿಲು ಖಾಲಿಯಾಗಿ ಎಲ್ಲಾ ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸುವಂತಹ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಆರ್ಟಿಪಿಎಸ್ ಪರ್ಯಾಯ ವ್ಯವಸ್ಥೆಗೆ ಮುಂದಾಗದಿದ್ದರೆ ರಾಜ್ಯಕ್ಕೆ ಶೇ. 40 ರಷ್ಟು ವಿದ್ಯುತ್ ಪೂರೈಕೆ ಮಾಡುವ ಆರ್ಟಿಪಿಎಸ್ನಿಂದಾಗಿ ರಾಜ್ಯ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ.
ಉಳಿದಂತೆ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ 500 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕ ಸೆ. 2 ರಿಂದ ವಾರ್ಷಿಕ ದುರಸ್ತಿಗೆ ಬಂದ್ ಮಾಡಲಾಗಿದೆ. ಸರಾಸರಿ 10 ರಿಂದ 11 ಮಿಲಿಯನ್ ಯುನಿಟ್ ಉತ್ಪಾದನೆ ಇಳಿಕೆಯಾಗಿದೆ. ಈ ಘಟಕ ಸೆ. 30ರಂದು ಪುನರ್ ಆರಂಭವಾಗುವ ನಿರೀಕ್ಷೆ ಇದೆ.
ಆರ್ಟಿಪಿ ಎಸ್ನ ನಾಲ್ಕು ಮತ್ತು ಬಿಟಿಪಿ ಎಸ್ನ ಒಂದು ಘಟಕ ಸೇರಿ ಒಟ್ಟು 1340 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಿಂತಿದೆ. ಬೆಸ್ಕಾಂ 1250 MW ವಿದ್ಯುತ್ ಕೊರತೆ ಎದುರಿಸುತ್ತಿದೆ ಎಂದು ಮಣಿವಣ್ಣನ್ ಹೇಳಿದ್ದಾರೆ.