ದಾವೂದ್ ಬಂಟನೆಂದು 5 ಕೋಟಿ ಸುಲಿಗೆ ಯತ್ನ: ಟೆಕ್ಕಿ ಬಂಧನ
ಏನಾಯಿತು ಅಂದರೆ ... ಅನಿಲ್ ಶರ್ಮಾ ಎಂಬ ಕಂಪ್ಯೂಟರ್ ಭೂಪ ಸೆಪ್ಟೆಂಬರ್ 11ರಂದು ತನ್ನ ಮಾಜಿ ಮಾಲೀಕನಿಗೆ ಫೋನು ಮಾಡಿದ್ದಾನೆ. ಧ್ವನಿ ಬದಲಾಯಿಸಿಕೊಂಡು, ತಾನು ದಾವೂದ್ ಇಬ್ರಾಹಿಂನ ಬಂಟ ಎಂದೂ, ತನಗೆ 5 ಕೋಟಿ ರುಪಾಯಿ ಒತ್ತೆಹಣ ನೀಸಬೇಕೆಂದೂ, ಇಲ್ಲವಾದಲ್ಲಿ ಆತನ 24 ವರ್ಷದ ಪುತ್ರನನ್ನು ಅಪಹರಿಸಿ ಸಾಯಿಸುವುದಾಗಿಯೂ ಬೆದರಿಕೆ ಹಾಕಿದ್ದಾನೆ.
ತನ್ನ ಪುತ್ರ ಕಣ್ಣೆದುರಿಗೇ ಇರುವುದನ್ನು ಖಾತ್ರಿಪಡಿಸಿಕೊಂಡ ಬಾಧಿತ ಉದ್ಯಮಿ, ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅಷ್ಟೋ ಇಷ್ಟೋ ತಂತ್ರಜ್ಞಾನ ತಿಳಿದುಕೊಂಡಿದ್ದ ಎಂಸಿಎ ವ್ಯಾಸಂಗ ಮಾಡಿದ್ದ ಶರ್ಮಾನನ್ನು ಬಲೆಗೆ ಬೀಳಿಸುವುದು ಪೊಲೀಸರಿಗೆ ಸ್ವಲ್ಪ ತ್ರಾಸ ಎನಿಸಿದೆ. ಏಕೆಂದರೆ ಶರ್ಮಾ, ಫೋನ್ ಕರೆ ಮಾಡದೆ ಕೇವಲ ಎಸ್ಎಂಎಸ್ ಮಾಡುತ್ತಾ ಉದ್ಯಮಿಯನ್ನು ಬೆದರಿಸುತ್ತಿದ್ದ.
ಆದರೂ ಎರಡು ವಾರ ಕಾಲ ಜಾಲಾಡಿದ ಬಳಿಕ ನಗೆ ಬೀರಿದ ಪೊಲೀಸರು ಸಪ್ದರ್ ಜಂಗ್ ಪ್ರದೇಶದಲ್ಲಿ ಆರೋಪಿ ಶರ್ಮಾನನ್ನು ಸೆರೆಹಿಡಿದಿದ್ದಾರೆ. ಎಂಟು ತಿಂಗಳ ಹಿಂದೆಯೇ ತನ್ನ ಮಾಲೀಕ, ಕಂಪ್ಯೂಟರ್ ಉದ್ಯಮಿಯನ್ನು ದೋಚಲು ತಯಾರಿ ನಡೆಸಿದ್ದಾಗಿ ಒಪ್ಪಿಕೊಂಡ ಶರ್ಮುಡು, ನಕಲಿ ದಾಖಲೆಗಳನ್ನು ನೀಡಿ ಸಿಮ್ ಖರೀದಿಸಿ, ಆಟವಾಡಿಸಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ.