ಮಕ್ಕಳಿಗೆ ಕ್ರೋ ಬಗ್ಗೆ ಗೊತ್ತು, ಕಾಗೆ ಬಗ್ಗೆ ಗೊತ್ತಿಲ್ಲ!
ಹೀಗೆ ಇಂದಿನ ಕಾಲದ ಮಕ್ಕಳ ಜೀವನಕ್ರಮ, ಅವರಿಗೆ ದೊರೆಯುತ್ತಿರುವ ಶಿಕ್ಷಣದ ಬಗ್ಗೆ ವ್ಯಾಖ್ಯಾನಿಸಿದವರು ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು. ಮಕ್ಕಳಿಗೆ ಎಲ್ಲದರ ಮಾಹಿತಿ ಇದೆಯೇ ಹೊರತು ಅನುಭವ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಅನುಭವವೂ ದಕ್ಕಬೇಕೆಂದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕು ಎಂದು ಹೇಳಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿ, ಇದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಹಿಂಜರಿತವೇನೂ ಆಗುವುದಿಲ್ಲ, ಏಕೆಂದರೆ ಇಂಗ್ಲಿಷ್ ಶಿಕ್ಷಣವಂತೂ ಇದ್ದೇ ಇರುತ್ತದೆ ಎಂದರು.
ಇಂದು ಎರಡು ಬಗೆಯ ನಾಗರಿಕರನ್ನು ನಾವು ಸೃಷ್ಟಿಸುತ್ತಿದ್ದೇವೆ. ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು ಮತ್ತು ದುಬಾರಿ ಬೆಲೆ ತೆತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಮಕ್ಕಳು. ಇದರಿಂದ ಉಂಟಾಗುತ್ತಿರುವ ಅಸಮಾನತೆ ಹೋಗಲಾಡಿಸಲು ಒಂದೇ ಬಗೆಯ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು. ಹತ್ತನೇ ಇಯತ್ತೆವರೆಗೆ ಸರಕಾರವೇ ಶಿಕ್ಷಣ ಒದಗಿಸಬೇಕು. ಹಾಗೆಯೆ, ಇಂಗ್ಲಿಷ್ ಸೇರಿದಂತೆ ಇತರ ವಿಷಯಗಳನ್ನು ಕೂಡ ಮಕ್ಕಳಿಗೆ ಕನ್ನಡದಲ್ಲಿಯೇ ಹೇಳಿಕೊಡುವಂತಾಗಬೇಕು. ಕನ್ನಡದ ಬಗೆಗಿನ ಪ್ರೀತಿಯಿಂದ ಮಾತ್ರವಲ್ಲ, ಪ್ರಾಯೋಗಿಕವಾಗಿಯೂ ಇದು ಸರಿಯಾದ ಮಾರ್ಗ ಎಂದು ಕಂಬಾರರು ನುಡಿದರು.