ಓದಿ ಓದಿ ಬೇಜಾರಾಗಿ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ
ಉತ್ತರ ಪ್ರದೇಶದ ಕನ್ನುಜ ನಿವಾಸಿಯಾಗಿದ್ದ ಮೆಹ್ತಾಬ್ ಅಹ್ಮದ್ ಐಐಟಿ-ಕಾನ್ಪುರದಲ್ಲಿ ಬಿಟೆಕ್ ಮೊದಲನೇ ವರ್ಷದ ವಿದ್ಯಾರ್ಥಿಯಾಗಿದ್ದ. ಹಾಸ್ಟೆಲ್ ನ 307ನೇ ಕೊಠಡಿಯಲ್ಲಿ ವಾಸವಿದ್ದ ಮೆಹ್ತಾಬ್ ಕೇವಲ ಎರಡು ತಿಂಗಳ ಹಿಂದೆ ಅಡ್ಮಿಷನ್ ತೆಗೆದುಕೊಂಡಿದ್ದ.
ನೇಣು ಹಾಕಿಕೊಂಡಿರುವುದು ಹಾಸ್ಟೆಲ್ ಕೋಣೆಯ ಕಿಟಕಿಯಿಂದ ಆತನ ಸ್ನೇಹಿತರಿಗೆ ತಿಳಿದುಬಂದಿದೆ. ಆಡಳಿತ ಮಂಡಳಿಗೆ ಕೂಡಲೆ ವಿಷಯ ತಿಳಿಸಲಾಗಿದೆ. ಕೂಡಲೆ ವಾರ್ಡನ್ ಗೆ ರೂಮಿಗೆ ಧಾವಿಸಿದರೂ ಆತ ಅಷ್ಟೊತ್ತಿಗೆ ಅಸುನೀಗಿದ್ದ. ಸಾವಿನ ಪತ್ರ ಬರೆದಿರುವ ಅಹ್ಮದ್, ತನಗೆ ಓದಿ ಬೇಜಾರಾಗಿದೆ ಎಂದು ಬರೆದಿದ್ದ.
ಆತನ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಇದರ ತನಿಖೆ ನಡೆಸಲೆಂದು ನಾಲ್ಕು ಸದಸ್ಯರ ಒಂದು ಸಮಿತಿಯನ್ನು ರಚಿಸಲಾಗಿದೆ. ಆತನ ಮೇಲೆ ragging ನಡೆದಿರಬಹುದೆ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಐಐಟಿ-ಕೆ ನಿರ್ದೇಶಕ ಸಂಜಯ್ ದಂಡೆ ಹೇಳಿದ್ದಾರೆ.
ಆಮೀರ್ ಖಾನ್ ನಟನೆಯ 3 ಈಡಿಯಟ್ಸ್ ಚಿತ್ರದಲ್ಲಿ ಐಐಟಿ ವಿದ್ಯಾರ್ಥಿಗಳ ಜೀವನದ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಕೆಲ ದಿನಗಳ ಹಿಂದೆ ಐಐಎಂ-ಬೆಂಗಳೂರು ವಿದ್ಯಾರ್ಥಿನಿ ಮಾಲಿನಿ ಮುರ್ಮು ಎಂಬಾಕೆ ಪ್ರೇಮ ವಿಫಲಗೊಂಡಿದ್ದರಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.