ಸ್ಫೋಟಕ್ಕೆ ಅಮಾಯಕ ಯುವತಿ ಕವಿತಾ ಸಾವು
ಕವಿತಾ ಸಾವಿನ ನಂತರ ಕಾರ್ಮಿಕ ಜೆಸ್ವಂತ್(40) ಎಂಬುವರು ಗುರುವಾರ ಮೃತಪಟ್ಟಿದ್ದಾರೆ.
ಉಳಿದ ಎಂಟು ಮಂದಿ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಸೇರಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ 4 ವರ್ಷ ಮಗು ಚಿನ್ಮಯಿ ಚೇತರಿಸಿಕೊಂಡಿದೆ.
ಕವಿತಾ ಅಕಾಲಿಕ ಸಾವು: ಲಕ್ಷ್ಮಿ ಕನ್ವೆನ್ಷನ್ ಹಾಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡದ ಒಂದು ಭಾಗದ ಗೋಡೆ ಪಕ್ಕದ ಮನೆಯ ಮೇಲೆ ಕುಸಿದಿದೆ. ಮನೆಯಲ್ಲಿದ್ದ ಕವಿತಾ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅವಶೇಷದಡಿಯಲ್ಲಿ ಸಿಲುಕಿಕೊಂಡಿದ್ದಳು.
ಕವಿತಾಳ ಇರುವಿಕೆ ತಿಳಿದ ಮೇಲೆ ತೀವ್ರವಾಗಿ ರಕ್ಷಣಾ ಕಾರ್ಯಕ್ಕೆ ಮುಂದಾದ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಕವಿತಾಳನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ. ಅವಶೇಷಗಳ ಅಡಿಯಿಂದ ಕವಿತಾಳ ಶವವನ್ನು ಹೊರತೆಗೆಯಲಾಗಿದೆ.
ಕಟ್ಟಡ ಕುಸಿಯುವ ವೇಳೆ ಜೀವ ಉಳಿಸಿಕೊಳ್ಳಲು ಓಡಿ ಹೋದೆವು. ಆದರೆ, ಕವಿತಾ ಪ್ರಜ್ಞೆ ತಪ್ಪಿ ಬಿದ್ದ ಪರಿಣಾಮ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಆಕೆ ತಮ್ಮ ಗೋಳಾಡುತ್ತಿದ್ದಾನೆ. ಒಕ್ಕಲಿಗರ ಸಂಘದ ಕಾಲೇಜಿನಲ್ಲಿ 2ನೇ ಪಿಯುಸಿ ಓದುತ್ತಿದ್ದ ಕವಿತಾ, ಕಾಲೇಜು ಮುಗಿಸಿಕೊಂಡು ಮನೆಗೆ ಹಿಂತಿರುಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.
ರಾತ್ರಿ ವೇಳೆ ಕೂಡಾ ಪರಿಹಾರ ಕಾರ್ಯ ಮುಂದುವರೆಯಲಿದೆ ಎಂದು ಅಗ್ನಿಶಾಮಕದಳದವರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ನಗರ ಜಿಲ್ಲಾಧಿಕಾರಿ ಅಯ್ಯಪ್ಪ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. [ಸಿಲಿಂಡರ್ ಸುರಕ್ಷತೆಗೆ ಸಲಹೆ]