ಇಷ್ಟಕ್ಕೂ ನ್ಯಾ.ಪಾಟೀಲ್ ಏಕೆ ರಾಜೀನಾಮೆ ನೀಡಿದರು?
'ಹೌಸಿಂಗ್ ಸೊಸೈಟಿಯಿಂದ ನಿವೇಶನ ಖರೀದಿಯಲ್ಲಿ ಯಾವುದೇ ಅಕ್ರಮವೆಸಗಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ತಮ್ಮ ವಿರುದ್ಧ ದ್ವೇಷ ಪ್ರೇರಿತ ಪ್ರಚಾರ ನಡೆಯುತ್ತಿರುವುದರಿಂದ ಮನ ನೊಂದು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ'.
ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ನ್ಯಾ. ಶಿವರಾಜ್ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಸಂಜೆ ಹೇಳಿದ್ದು ಹೀಗೆ. ಪತ್ರಿಕಾಗೋಷ್ಠಿಯ ಸಾರಾಂಶ ಇಷ್ಟು:
'ನಾನು ಲೋಕಾಯುಕ್ತ ಹುದ್ದೆ ಆಕಾಂಕ್ಷಿಯಾಗಿರಲಿಲ್ಲ. ಆ ಸ್ಥಾನ ನೀಡುವಂತೆ ಕೇಳಿಯೂ ಇರಲಿಲ್ಲ. ಆದರೆ ಅಂಥದೊಂದು ಅವಕಾಶ ಬಂದಾಗ ಅದನ್ನು ಒಪ್ಪಿಕೊಂಡೆ. ಜತೆಗೆ ಕರ್ನಾಟಕ ಜನತೆ ಸೇವೆ ಮಾಡಲು ಇದೊಂದು ಅವಕಾಶ ಎಂದು ಭಾವಿಸಿದ್ದೆ. ಆದರೆ ಕಳೆದ ಕೆಲವು ದಿನಗಳಿಂದ ನನ್ನ ವಿರುದ್ಧ ದುರುದ್ದೇಶವಾದ ಪ್ರಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ಮತ್ತು ಪತ್ನಿ ಹೆಸರಿನಲ್ಲಿ ನಿವೇಶನ ಹೊಂದಿರುವ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಲು ಬಯಸುತ್ತಿದ್ದೇನೆ'.
'1982ರಲ್ಲಿ ನಾನು ಕರ್ನಾಟಕ ಹೈಕೋರ್ಟ್ನಲ್ಲಿ ವಕೀಲನಾಗಿ ಸೇವೆ ಸಲ್ಲಿಸುತ್ತಿರುವಾಗ ವಸಂತನಗರದಲ್ಲಿ ಸಣ್ಣ ನಿವೇಶನವೊಂದನ್ನು ಖಾಸಗಿ ವ್ಯಕ್ತಿಯಿಂದ ಖರೀದಿಸಿ ಮನೆ ಕಟ್ಟಿದ್ದೆ. ಈ ನಿವೇಶನವನ್ನು ಸರ್ಕಾರ ಅಥವಾ ಯಾವುದೇ ಸೊಸೈಟಿಯಿಂದ ಪಡೆದುಕೊಂಡಿಲ್ಲ'.
'ಆ ಬಳಿಕ 1994ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಕರ್ನಾಟಕ ನ್ಯಾಯಾಂಗ ಇಲಾಖೆ ಹೌಸಿಂಗ್ ಸೊಸೈಟಿಯಿಂದ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನವೊಂದನ್ನು ಪಡೆದುಕೊಂಡಿದ್ದೆ. ನ್ಯಾಯಾಮೂರ್ತಿಗಳಿಗೆ ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗೆ ಕೆಲವರು ಅರ್ಜಿ ಸಲ್ಲಿಸಿದ್ದರು. ಆದರೆ ಎರಡೂ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡಿದೆ.