ಅಪಪ್ರಚಾರಕ್ಕೆ ನೊಂದ ಶಿವರಾಜ್ ಪಾಟೀಲ್ ರಾಜೀನಾಮೆ
'ತಮ್ಮ ವಿರುದ್ಧ ಕಳೆದ ಕೆಲವು ದಿನಗಳಿಂದ ದ್ವೇಷಪೂರಿತ ಅಪಪ್ರಚಾರ ಮಾಡಲಾಗುತ್ತಿದೆ. ಈ ರೀತಿಯ ಆರೋಪಗಳಿಂದ ಮನನೊಂದು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ, ತಾವು ಮತ್ತು ತಮ್ಮ ಹೆಂಡತಿ ಕಾನೂನುಬಾಹಿರವಾಗಿ ಹೌಸಿಂಗ್ ಸೊಸೈಟಿ ನಿವೇಶ ಹೊಂದಿಲ್ಲ' ಎಂದು ತಮ್ಮ ರಾಜೀನಾಮೆ ಮತ್ತು ಕುಟುಂಬದ ವಿರುದ್ಧ ಮಾಡಿರುವ ಆರೋಪಗಳಿಗೆ ಅವರು ಸುಮಾರು 4 ಪುಟಗಳ ಸ್ಪಷ್ಟೀಕರಣ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆವೇಷ ಮತ್ತು ದುಃಖದಿಂದ ಸ್ಪಷ್ಟೀಕರಣವನ್ನು ಓದಿ ಮುಗಿಸಿದ ನ್ಯಾ. ಶಿವರಾಜ್ ಪಾಟೀಲ್ ಅವರು ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೂ ಪ್ರತಿಕ್ರಿಯಿಸಲು ಅಲ್ಲಿ ನಿಲ್ಲದೆ ನೇರವಾಗಿ ಕಚೇರಿಯಿಂದ ಹೊರನಡೆದರು. ಅಲ್ಲಿಂದ ಮುಂದೆ ನೇರವಾಗಿ ತಮ್ಮ ಮನೆಗೆ ತೆರಳಿದರು.
ಇದರೊಂದಿಗೆ ಲೋಕಾಯುಕ್ತ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲೋಕಾಯುಕ್ತರೊಬ್ಬರು ಅಧಿಕಾರವಧಿ ಪೂರ್ಣಗೊಳಿಸುವ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ. ಅದರಲ್ಲಿಯೂ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲಿ ಆ ಸ್ಥಾನದಿಂದ ಆರೋಪದ ಮೇಲೆ ಹೊರ ನಡೆದಿದ್ದಾರೆ.
ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಆ. 2ರಂದು ಲೋಕಾಯುಕ್ತ ಹುದ್ದೆಯಿಂದ ನಿರ್ಗಮಿಸಿದ್ದರು. ಆ ಹಿನ್ನೆಲೆಯಲ್ಲಿ ಸರಕಾರ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಶಿವರಾಜ್ ಪಾಟೀಲ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿತ್ತು.
ನ್ಯಾ. ಶಿವರಾಜ್ ಪಾಟೀಲ್ ಆ. 5ರಂದು ನೂತನ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದಿನ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಗಣಿ ವರದಿಯಿಂದಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಅಂಥ ಲೋಕಾಯುಕ್ತ ಹುದ್ದೆಗೆ ನೂತನವಾಗಿ ಬಂದ ನ್ಯಾ. ಶಿವರಾಜ್ ಪಾಟೀಲ್ ಇದೀಗ ನಿವೇಶನ ಆರೋಪದ ಮೇಲೆ ರಾಜೀನಾಮೆ ನೀಡಿರುವುದು ವಿಪರ್ಯಾಸ.