ರಾಜ್ಯದಲ್ಲಿ ಮುಂದುವರಿದಿದೆ ರಾಜೀನಾಮೆ- ಬಂಧನಗಳ ಪರ್ವ
ಏಕೆಂದರೆ ಸ್ವತಃ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಜತೆಗೆ ಕಟುವಾದ ಪದ ಪ್ರಯೋಗವನ್ನೂ ಮಾಡಿದೆ.
ಕೆಪಿಎಸ್ಸಿ ಮಾಜಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಆಯೋಗದ ಹಾಲಿ ಆಯುಕ್ತ ಎಚ್.ಎನ್. ಕೃಷ್ಣ ಗಂಭೀರ ಆರೋಪ ಎದುರಿಸುತ್ತಿರುವುದರಿಂದ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ತಿಳಿಸಿದರು.
ಇನ್ನು, ನ್ಯಾ. ಶಿವರಾಜ್ ಪಾಟೀಲ್ ಅವರು ಯಾವ ಆರೋಪ ಹೊತ್ತು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದರೋ ಅದೇ ಪ್ರಕರಣದ ಆಜುಬಾಜಿನಲ್ಲಿ ಹೊಸ ಉಪಲೋಕಾಯುಕ್ತ ಗುರುರಾಜ್ ಅವರು ಸಹ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎನ್ನಲಾಗಿದೆ. ನ್ಯಾ. ಪಾಟೀಲರ ರಾಜೀನಾಮೆ ಪ್ರಸಂಗ ಮುಗಿಯುತ್ತಿದ್ದಂತೆ ಅವರೂ ರಾಜೀನಾಮೆ ನೀಡುವ ಸೂಚನೆಗಳಿವೆ ಎಂದು ತಿಳಿದುಬಂದಿದೆ. ಗಣಿ ಲಂಚ ಪ್ರಕರಣದಲ್ಲಿ ತಮ್ಮ ಹೆಸರಿನ ಇನಿಷಿಯಲ್ಸ್ ಕೇಳಿ ಬಂದಿದ್ದೇ ತಡ ಲೋಕಾಯುಕ್ತ ಎಸ್ ಪಿ ವಿದ್ಯಾಸಾಗರರು ಎತ್ತಂಗಡಿಯಾಗಿದ್ದರು.
ಈ ಮಧ್ಯೆ, ಲೋಕಾಯುಕ್ತ ದಾಳಿಗೆ ಹೆದರಿ ಕಳ್ಳನಂತೆ ಓಡಿಹೋಗಿರುವ ಅಮೃತಹಳ್ಳಿ ಇನ್ಸ್ಪೆಕ್ಟರ್ ರತ್ನಾಕರ ಶೆಟ್ಟಿ ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅವರನ್ನು ಹಿಡಿಯುವುದು ದಾಳಿ ನಡೆಸಲು ಹೋಗಿದ್ದ ಲೋಕಾಯುಕ್ತ ಕೆಲಸ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಸಾಹೇಬರು ಮುಗುಮ್ಮಾಗಿ ಕೈಕಟ್ಟಿಕೊಂಡು ಕುಳಿತಿದ್ದಾರೆ.