ರೈಲಿನಲ್ಲಿ ಯುವತಿ ಮೇಲೆ ಮಾನಭಂಗ ಯತ್ನ: ಟೆಕ್ಕಿಗೆ ದಂಡ
ಭಂಡುಪ್ ನಿವಾಸಿ ಪ್ರಸಾದ್ ಚಾಂದೆ ಎಂಬ ಸಾಫ್ಟ್ ವೇರ್ ಎಂಜಿನಿಯರ್, ತುರಂತೊ ಎಕ್ಸ್ಪ್ರೆಸ್ ರೈಲು ಇಗತ್ ಪುರಿ ಸಮೀಪ ಬಂದಾಗ ಗಾಢ ನಿದ್ರೆಯಲ್ಲಿದ್ದ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿ, ಅವಳ ಮಾನಭಂಗ ಯತ್ನ ಆರೋಪದ ಮೇಲೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಯುವತಿಯು ನಾಗ್ಪುರದಿಂದ ಮುಂಬೈಗೆ ತಾಯಿಯ ಜತೆ ಪ್ರಯಾಣಿಸುತ್ತಿದ್ದರು.
ಪ್ರಸಾದ್ ಮತ್ತು ಯುವತಿಯ ಸೀಟುಗಳು ಎದುರಾಬದುರು ಇದ್ದುದೇ ಈ ಕುಕೃತ್ಯಕ್ಕೆ ನೆರವಾಗಿದೆ ಎನ್ನಲಾಗಿದೆ. 'ನಡುರಾತ್ರಿ 2 ರಿಂದ 3 ಗಂಟೆ ವೇಳೆಯಲ್ಲಿ ಆರೋಪಿ ಅನೇಕ ಬಾರಿ ನನ್ನ ಉಡುಪಿನ ಮೇಲೆ ಕೈಯಾಡಿಸುತ್ತಿರುವುದು ನನ್ನ ಅರಿವಿಗೆ ಬಂತು. ಆದರೂ ಸಾವರಿಸಿಕೊಂಡು ಸುಮ್ಮನಾಗಿದ್ದೆ. ಆದರೆ ಅವನು ಮುಂದುವರಿದು ಉಡುಪಿನೊಳಗಿಂದ ನನ್ನ ಮೈಮೇಲೆ ಕೈಯಾಡಿಸತೊಡಗಿದ. ಆಗ ಅವನ ಕೆನ್ನೆಗೆ ಬಾರಿಸಿದೆ' ಎದು ಬಾಧಿತ ಯುವತಿ ಘಟನೆಯನ್ನು ವಿವರಿಸಿದ್ದಾರೆ.
ಯುವತಿಯ ತಾಯಿಗೂ ಎಚ್ಚರವಾಗಿ, ಆರೋಪಿಯನ್ನು ಹಿಡಿದುಕೊಳ್ಳಲು ಯತ್ನಿಸಿದ್ದರು. 'ಅವನು ಓಡಿಹೋಗತೊಡಗಿದ. ಆದರೆ ಮುಂದಿನ ಬೋಗಿಯ ವರೆಗೂ ಅವನನ್ನು ಹಿಂಬಾಲಿಸಿ, ನಮ್ಮ ಬೋಗಿಗೆ ಹಿಡಿದು ತಂದೆವು. ಆದರೆ ಅವನು ಸದ್ಯದಲ್ಲೇ ತಾನು ಮದುವೆಯಾಗುತ್ತಿರುವುದಾಗಿಯೂ, ತನ್ನ ವಿರುದ್ಧ ಪೊಲೀಸ್ ದೂರು ದಾಖಲಿಸಬಾರದು ಎಂದೂ ಗೋಗರೆದ' ಎಂದು ಯುವತಿಯ ತಾಯಿ ಹೇಳಿದ್ದಾರೆ.
ಯುವತಿಯ ತಾಯಿಯ ಸೂಚನೆಯಂತೆ ದೂರನ್ನು ದಾಖಲಿಸದೆ 200 ರುಪಾಯಿ ದಂಡ ಕಟ್ಟಿಸಿಕೊಂಡ ಪೊಲೀಸರು ಕೆಲವು ಗಂಟೆಗಳ ಕಾಲ ಟೆಕ್ಕಿಯನ್ನು ಬಂಧಿಸಿ ಬಿಡುಗಡೆ ಗೊಳಿಸಿದರು.