ಪಾಕ್ ಮಣಿಸಿದ ಆಟಗಾರರಿಗೆ ಹಾಕಿ ಇಂಡಿಯಾ ಅಪಮಾನ
ಬಲಿಷ್ಠ ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಕಿರೀಟ ಧರಿಸಿದ ಭಾರತದ ಆಟಗಾರರಿಗೆ ಹಾಕಿ ಇಂಡಿಯಾ ಸನ್ಮಾನ ಕಾರ್ಯಕ್ರಮದಲ್ಲಿ ದೊಡ್ಡ ಅಪಮಾನವಾಗಿದೆ.
ಹಾಕಿ ಕಥೆ ಇಷ್ಟೇ: ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಾಕಿ ಇಂಡಿಯಾದ ಕಾರ್ಯದರ್ಶಿ ಜನರಲ್ ನಾರಿಂದರ್ ಬಾತ್ರಾ ಅವರು ನೀಡಿದ 25 ಸಾವಿರ ಬಹುಮಾನದ ಮೊತ್ತವನ್ನು ನಾವು ಎಲ್ಲರೂ ತಕ್ಷಣವೇ ತಿರಸ್ಕರಿಸಿದೆವು. ನಮ್ಮ ಪ್ರತಿಭೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ಹಿರಿಯ ಆಟಗಾರ ಗುರ್ಬಾಜ್ ಸಿಂಗ್ ಹೇಳಿದ್ದಾರೆ.
ಪರಿಸ್ಥಿತಿ ಹೀಗೆ ಮುಂದುವರೆದರೆ ಕಿರಿಯ ಆಟಗಾರರನ್ನು ಹಾಕಿಯತ್ತ ಆಕರ್ಷಿಸಲು ಸಾಧ್ಯವಿಲ್ಲ. ಕ್ರಿಕೆಟ್ ಅಥವಾ ಇತರೆ ವೈಯಕ್ತಿಕ ಕ್ರೀಡೆಗಳಿಗೆ ನೀಡುವ ಮಹತ್ವ, ಪ್ರಾಯೋಜಕತ್ವ, ಬಹುಮಾನಗಳು ರಾಷ್ಟ್ರೀಯ ಕ್ರೀಡೆಗೂ ದೊರೆತರೆ ಮಾತ್ರ ಹಾಕಿ ಉಳಿಸಲು ಸಾಧ್ಯ ಎಂದು ಗುರ್ಬಾಜ್ ಸಿಂಗ್ ನೊಂದು ನುಡಿದಿದ್ದಾರೆ.
ಫೈನಲ್ನಲ್ಲಿ ರಾಜ್ಪಾಲ್ ಸಿಂಗ್ ಬಳಗದವರು ಪೆನಾಲ್ಟಿ ಶೂಟೌಟ್ ನಲ್ಲಿ 4-2ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ದೇಶದ ಹಾಕಿ ಪ್ರಿಯರ ಸಂಭ್ರಮ ಹೆಚ್ಚಿಸಿದ್ದರು.
ಭಾರತದ ರಾಜ್ಪಾಲ್ ಸಿಂಗ್, ದಾನಿಶ್ ಮುಜ್ತಬಾ, ಯುವರಾಜ್ ವಾಲ್ಮೀಕಿ ಮತ್ತು ಸರ್ವಂಜಿತ್ ಸಿಂಗ್ ಪೆನಾಲ್ಟಿ ಶೂಟೌಟ್ನಲ್ಲಿ ಚೆಂಡನ್ನು ಗುರಿ ಸೇರಿಸಿದರು. ಆದರೆ, ಹಾಕಿ ವೀರರ ಸಂಭ್ರಮಾಚರಣೆಗೆ ಹಾಕಿ ಇಂಡಿಯಾ ತಣ್ಣೀರೆರೆಚಿದೆ.