ವಜ್ರಖಚಿತ ಕಿರೀಟ ರೆಡ್ಡಿಗೆ ವಾಪಸ್ ಇಲ್ಲ : ಟಿಟಿಡಿ
ಸಿಬಿಐನಿಂದ ಬಂಧಿತನಾಗಿರುವ ಜನಾರ್ದನ ರೆಡ್ಡಿ ಅವರು ಅಕ್ರಮವಾಗಿ ಗಳಿಸಿದ ಆಸ್ತಿಯಿಂದ ನೀಡಲಾಗಿದ್ದ 2.5 ಅಡಿ ಎತ್ತರದ ಕಿರೀಟವನ್ನು ಜನಾರ್ದನ ರೆಡ್ಡಿಯವರಿಗೆ ವಾಪಸ್ ನೀಡಬೇಕು ಎಂದು ಕೆಲ ರಾಜಕಾರಣಿಗಳಿಂದ ಮತ್ತು ಭಕ್ತವೃಂದದಿಂದ ಆಗ್ರಹ ಬಂದಿರುವ ಹಿನ್ನೆಲೆಯಲ್ಲಿ ತನ್ನ ನಿಲುವನ್ನು ಟಿಟಿಡಿ ಖಚಿತಪಡಿಸಿದೆ.
ವೆಂಕಟೇಶ್ವರ ದೇವರಿಗೆ ನೀಡಲಾಗಿರುವ ಯಾವುದೇ ಕೊಡುಗೆಯನ್ನು ವಾಪಸ್ ಮಾಡುವ ಸಂಪ್ರದಾಯವಿಲ್ಲ. ಇದು ಜನಾರ್ದನ ರೆಡ್ಡಿ ನೀಡಿರುವ ಕಾಣಿಕೆಗೂ ಅನ್ವಯಿಸುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಜನಾರ್ದನ ರೆಡ್ಡಿಯವರು ಈ ವಜ್ರಖಚಿತ ಕಿರೀಟವನ್ನು ಬಾಲಾಜಿಗೆ ಕಾಣಿಕೆಯಾಗಿ ನೀಡಿದ್ದರು.
ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯಡಿ ಸಿಬಿಐನಿಂದ ಸೆ. 5ರಂದು ಬಂಧಿತರಾಗಿರುವ ರೆಡ್ಡಿಯವರು ಕೊಡುಗೆಯಾಗಿ ನೀಡಿದ್ದ ಕಿರೀಟವನ್ನು ಅವರಿಗೇ ಹಿಂದಿರುಗಿಸಬೇಕು ಎಂದು ಭಕ್ತಾದಿಗಳು ತಿರುಮಲದಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಕಳಂಕಿತರಿಂದ ಇಸಿದುಕೊಂಡಿರುವ ಕೊಡುಗೆಯನ್ನು ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದ್ದರು.