ಪತ್ರಕರ್ತರಿಗೆ ವಕೀಲರಿಂದ ಹಲ್ಲೆ: ಪ್ರೆಸ್ ಕ್ಲಬ್ ನಲ್ಲಿ ಪ್ರತಿಭಟನೆ
ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರ ಧಾಳಿಯನ್ನು ಖಂಡಿಸಿ ಪ್ರೆಸ್ ಗಿಲ್ಡ್ ಅಧ್ಯಕ್ಷ ಪ್ರಭಾಕರ್ ಮಾತನಾಡಿದರು. ಹಲ್ಲೆ ನಡೆಸಿದ ವಕೀಲರ ವಿರುದ್ಧ ಪ್ರತಿಭಟನೆಯಲ್ಲಿ ದಿಕ್ಕಾರ ಕೂಗಲಾಯಿತು.
ವರದಿಗಾರರ ಕೂಟ ಸೇರಿದಂತೆ ಸಮಸ್ತ ಪತ್ರಕರ್ತರು ವಕೀಲರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ಘಟನೆಗೆ ಕಾರಣರಾದ ವಿರುದ್ಧ ಮುಖ್ಯ ನ್ಯಾಯಾಧೀಶರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ.
ಇಂತಹ ಘಟನೆ ನಡೆಯುವುದು ಇದು ಮೊದಲಲ್ಲ. ಇದಕ್ಕೂ ಮೊದಲು ಹಲವು ಭಾರಿ ವಕೀಲರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ವರದಿಗಾರರ ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ವರದಿಗಾರರ ಕೂಟದ ಅಧ್ಯಕ್ಷ ಬಿ. ಎನ್. ಶ್ರೀಧರ್ ತಿಳಿಸಿದ್ದಾರೆ.
ದರ್ಶನ್ ಅವರನ್ನು ನಿನ್ನೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರು ಪಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಟಿವಿ ಪತ್ರಕರ್ತರು ಓಬಿ ವಾಹನದಲ್ಲಿ ನ್ಯಾಯಾಲಯದ ಆವರಣದಲ್ಲಿದ್ದರು. ಆಗ ಆ ವಾಹನ ನ್ಯಾಯಾಲಯದಲ್ಲಿ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ತಾಗಿತ್ತು. ಕೆರಳಿದ ಆವ್ಯಕ್ತಿ ಜಗಳ ಆರಂಭಿಸಿದರು.
ಸುತ್ತಮುತ್ತಲಿನ ಹಲವು ವ್ಯಕ್ತಿಗಳು, ಹಲವು ವಕೀಲರುಗಳು ಸೇರಿಕೊಂಡು ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ ನಡೆಸಿದ್ದರು. ವಕೀಲರು ಮಾಧ್ಯಮ ಪ್ರತಿನಿಧಿಗಳಿಂದ ಕ್ಯಾಮರಾಗಳನ್ನು ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿದ್ದರು. ವರದಿಗಾರರು ಮತ್ತು ಕ್ಯಾಮರಾಮ್ಯಾನ್ ಗಳ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ.
3 ವಿಡಿಯೋ ಕ್ಯಾಮರಾ ಜಖಂಗೊಂಡಿದೆ. ಆರು ಮಂದಿ ಮಾಧ್ಯಮ ಪ್ರತಿನಿಧಿಗಳಿಗೆ ಗಾಯವಾಗಿತ್ತು. ಕೆಲವು ವಕೀಲರು ಕೋರ್ಟ್ ಹೊರಗಿದ್ದ ಮಾಧ್ಯಮ ಪ್ರತಿನಿಧಿಗಳತ್ತ ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು.