ಸಂಚಾರ ನೋವು ನರಕ : ಬೆಂಗಳೂರಿಗೆ ಪ್ರಶಸ್ತಿ!
ಬೆಂಗಳೂರಿನ ರಸ್ತೆಗಳು ಎಂತಹ ನರಕ ಸೃಷ್ಟಿವೆ ಎಂಬುದನ್ನು ಕೆಲಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಕಿಕ್ಕಿರಿದು ತುಂಬಿದ ಬಸ್ಸನ್ನು ಏರಿದರೆ ಗಮ್ಯ ತಲುಪುವುದು ಯಾವಾಗಲೋ? ಮೂಗಿಗೆ ಕರ್ಚೀಫು ಕಟ್ಟಿಕೊಳ್ಳದೆ ರಸ್ತೆಗಿಳಿದರೆ ಆರೇ ತಿಂಗಳಲ್ಲಿ ಅಸ್ತಮಾ ಗ್ಯಾರಂಟಿ ಅಥವಾ ಉಸಿರಾಟದ ತೊಂದರೆ. ಪ್ರತಿದಿನ ರಸ್ತೆಗಳಲ್ಲಿ ಓಡಾಡುವವರಿಗೆ ಈ ತೊಂದರೆ ಎಂತಹ ರೀತಿಯದು ಎಂದು ತಿಳಿದಿರುತ್ತದೆ.
ಐಬಿಎಂನ 4ನೇ ಅನ್ಯುವಲ್ ಗ್ಲೋಬಲ್ ಕಮ್ಯೂಟರ್ ಪೇನ್ ಸರ್ವೆ ನಡೆಸಿದ ಸಮೀಕ್ಷೆ ಪ್ರಕಾರ, ಓಡಾಡುವವರಿಗೆ ನರಕ ಸೃಷ್ಟಿಸುವ ಜಾಗತಿಕ ನಗರಗಳ ರೇಸಿಂಗ್ ನಲ್ಲಿ ಬೆಂಗಳೂರು 6ನೇ ಸ್ಥಾನ ಪಡೆದಿದೆ. ದೆಹಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮೆಕ್ಸಿಕೋ ಮೊದಲ ಸ್ಥಾನ ಪಡೆದು ಪ್ರಶಸ್ತಿಗೆ ಪಾತ್ರವಾಗಿದ್ದರೆ, ಮಾಂಟ್ರಿಯೆಲ್ ಅಡ್ಡಾಡುವವರಿಗೆ ಸ್ವರ್ಗವೆನಿಸಿದೆ.
ವಾಹನ ದಟ್ಟಣೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದು ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲಿ ಕೂಡ ಒತ್ತಡ ಮತ್ತು ಸಿಟ್ಟು ಸೆಡವು ಹೆಚ್ಚಾಗುವಂತೆ ಮಾಡಿದೆ. ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಬೇಗನೆ ತಲುಪಬೇಕೆಂಬ ತರಾತುರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ, ಅಪಘಾತಗಳಾಗುತ್ತಿವೆ. ಇದರಿಂದಾಗಿ ದಿನನಿತ್ಯ ಅಡ್ಡಾಡುವ ಮಕ್ಕಳ ಸಾಧನೆಯ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.