ಮೈತ್ರಾದೇವಿ ಆತ್ಮ ಯಡ್ಡಿಯನ್ನು ಕಾಪಾಡುತ್ತದೆಯೇ?
ಆದರೆ, ಯಡಿಯೂರಪ್ಪ ಅವರ ರಾಘವೇಂದ್ರ ಸ್ವಾಮಿ ಭಕ್ತಿ ಹೊಸತೇನಲ್ಲ. ಶಿಕಾರಿಪುರಕ್ಕೆ ಬಂದು ನೆಲೆಸಿ, ಮೈತ್ರಾದೇವಿಯವರನ್ನು ಮದುವೆಯಾದ ನಂತರದ ದಿನಗಳಲ್ಲಿ ಶುರುವಾದ ರಾಘವೇಂದ್ರ ಸ್ವಾಮಿಗಳ ಮೇಲಿನ ಅವರ ನಂಬಿಕೆ ಇದುವರೆವಿಗೂ ಮುಂದುವರಿದುಕೊಂಡೇ ಬಂದಿದೆ.
ಒಂದು ಮೂಲದ ಪ್ರಕಾರ ಯಡಿಯೂರಪ್ಪನವರಿಗೆ ರಾಯರ ಬಗ್ಗೆ ಅಪಾರ ಭಕ್ತಿ ಮೂಡಲು ಮೂಲ ಕಾರಣವಾಗಿದ್ದು ಅವರ ಪತ್ನಿ ಮೈತ್ರಾದೇವಿ. ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ಮೇಲೆ ಗಂಡು ಮಕ್ಕಳು ಬೇಕೆಂದು ಬಯಸಿದ್ದ ದಂಪತಿಗಳು ಅದಕ್ಕಾಗಿ ಮಂತ್ರಾಲಯದ ಗುರು ರಾಘವೇಂದ್ರ ಯತಿಗಳಿಗೆ ಹರಕೆ ಹೊತ್ತರು.
ಇದರ ಫಲವಾಗಿ ಜನಿಸಿದ ಮೊದಲ ಗಂಡು ಮಗನಿಗೆ ಅವರಿಟ್ಟ ಹೆಸರು ರಾಘವೇಂದ್ರ. ಆತನೇ ಈಗ ಶಿವಮೊಗ್ಗ ಸಂಸದ. ಇನ್ನೋರ್ವ ಮಗ ವಿಜಯೇಂದ್ರ. ಈ ಹೆಸರು ರಾಘವೇಂದ್ರ ಸ್ವಾಮಿಗಳ ಗುರು ಸುಧೀಂದ್ರ ತೀರ್ಥರ ಗುರುಗಳದು.
ಹೀಗೆ ಗಂಡು ಮಕ್ಕಳು ಜನಿಸಿದ ಮೇಲೆ ಯಡಿಯೂರಪ್ಪ ಹಾಗೂ ಮೈತ್ರಾದೇವಿ ಅವರ ಭಕ್ತಿ ಗಾಢವಾಗುತ್ತಾ ಹೋಯಿತು. ಇದರ ಪ್ರತೀಕವಾಗಿ ಯಡಿಯೂರಪ್ಪ ಅವರ ಮನೆಯ ದೇವರಕೋಣೆಯಲ್ಲಿ ರಾಯರ ಬೆಳ್ಳಿ ಫೋಟೊ ಭದ್ರವಾಗಿ ನೆಲೆಯಾಯಿತು.
ಮನೆ ದೇವರಾದ ಯಡಿಯೂರು ಸಿದ್ದಲಿಂಗೇಶ್ವರ ಫೋಟೋ ನಂತರ ರಾಯರ ಬೆಳ್ಳಿ ಕಟ್ಟಿನ ಸುಂದರ ಮೂರ್ತಿಗೆ ಪ್ರಾಶಸ್ತ್ಯ. ಕಷ್ಟ ಬಂದಾಗ ತಪ್ಪದೇ ಜ್ಯೋತಿಷಿಗಳ ಮೊರೆ ಹೊಕ್ಕುವ ಯಡಿಯೂರಪ್ಪ ಅವರಿಗೆ ಅನೇಕ ಬಾರಿ ಸ್ವಪ್ನದಲ್ಲಿ ಮಂತ್ರಾಲಯಕ್ಕೆ ಹೋಗುವಂತೆ ಮೈತ್ರಾದೇವಿ ಮೂಲಕ ಪ್ರೇರಣೆಯಾಗುವುದಂತೆ.
ಹೀಗೆ ಹಲವು ಬಾರಿ ಮಂತ್ರಾಲಯದ ರಾಯರ ಸನ್ನಿಧಿಗೆ ಹೋಗಿ ಬಂದ ಅವರ ಕಷ್ಟಗಳು ನಿವಾರಣೆಯಾಗಿದೆಯಂತೆ. ಅದರೆ, ಎಲ್ಲೂ ಕೂಡಾ ಈ ಬಗ್ಗೆ ಯಡಿಯೂರಪ್ಪ ಅವರು ಹೇಳಿಕೊಂಡಿಲ್ಲ. ಈಗ ಮತ್ತೆ ಭೂ ಹಗರಣ, ಅಕ್ರಮ ಗಣಿಗಾರಿಕೆ, ಸ್ವಜನ ಪಕ್ಷಪಾತ ಮುಂತಾದ ಕೇಸ್ ಗಳ ಸುಳಿಯಲ್ಲಿರುವ ಯಡಿಯೂರಪ್ಪ ಅವರನ್ನು ಯಾರು ರಕ್ಷಿಸುವರು ಕಾದು ನೋಡಬೇಕಿದೆ?
[ಸುದ್ದಿ ಮೂಲ: ಆರ್.ಟಿ. ವಿಟ್ಠಲ ಮೂರ್ತಿ, ಹಾಯ್ ಬೆಂಗಳೂರ್ ಲೇಖನ]