ಕನ್ನಡ ಅರ್ಚಕರು, ಕೇರಳ ತಂತ್ರಿಗಳ ಕ್ಲ್ಯಾಶ್
ಒಂದೆಡೆ ಅಷ್ಟಮಂಗಲ ಪ್ರಶ್ನೆ ಪೂಜಾ ಕೈಂಕರ್ಯಕ್ಕೆ ಅಡ್ಡಿ ಒಡ್ಡಿದ್ದ ಪ್ರಗತಿಪರ ಸಂಘಟನೆಗಳು ಯುದ್ಧ ವಿರಾಮ ಘೋಷಿಸಿದರೆ, ದೇಗುಲದ ಗರ್ಭಗುಡಿ ಪ್ರವೇಶ ವಿಷಯದಲ್ಲಿ ಕೇರಳದ ತಂತ್ರಿಗಳು ಹಾಗೂ ಕನ್ನಡದ ಅರ್ಚಕರು ಕಾದಾಡಿದ ಘಟನೆ ನಡೆದಿದೆ.
ಕೇರಳ ತಂತ್ರಿಗಳಿಗೆ ದೇವಾಲಯದ ಆವರಣದಲ್ಲಿರುವ ಚಾಮುಂಡೇಶ್ವರಿ ಗರ್ಭಗುಡಿಗೆ ಪ್ರವೇಶಿಸಲು ಅರ್ಚಕರು ನಿರಾಕರಿಸಿದ್ದೆ ಗೊಂದಲಕ್ಕೆ ಕಾರಣವಾಗಿದೆ.
ದೇವಾಲಯದಲ್ಲಿ ಅಷ್ಟ ಮಂಗಲ ಕಾರ್ಯಕ್ರಮ ನಡೆಸಲು ಬಂದಿದ್ದ ತಂತ್ರಿಗಳು, ಚಾಮುಂಡೇಶ್ವರಿಯ ಗರ್ಭಗುಡಿ ಪ್ರವೇಶಿಸಿ, ದೇವಿಯ ಅವಾಹನೆಗೆ ಮುಂದಾಗುತ್ತಿದ್ದಂತೆ, ದೇವಸ್ಥಾನದ ಅರ್ಚಕರು, ಗರ್ಭ ಗುಡಿ ಪ್ರವೇಶಿಸದಂತೆ ನಿರ್ಬಂಧ ಹಾಕಿದರು.
ಇದರಿಂದ ಕೆಂಡಾಮಂಡಲರಾದ ತಂತ್ರಿಗಳಿಗೆ ಅರ್ಚಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವಿಷಯ ತಹಸೀಲ್ದಾರ್ಗೆ ತಲುಪಿಸಲಾಯಿತು. ಅಲ್ಲಿಂದ ಸುದ್ದಿ ಮುಜರಾಯಿ ಇಲಾಖೆಯ ಆಯುಕ್ತರಿಗೆ ಮುಟ್ಟಿತು.
ದೇವಾಲಯದ ಅರ್ಚಕರ ಅನುಮತಿ ಇಲ್ಲದೆ ಗರ್ಭಗುಡಿ ಪ್ರವೇಶಿಸುವಂತಿಲ್ಲ ಎಂದು ಆಯುಕ್ತರು ಹೇಳಿದರು.
ಕೇರಳ ತಂತ್ರಿಗಳು ಗೊಣಗುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಿ ಚಂಡಿಕಾ ಹೋಮಕ್ಕೆ ಸಿದ್ಧರಾದರು. ಈ ವಿಷಯದ ಬಗ್ಗೆ ಸಚಿವೆ ಶೋಭಾ ಮೇಡಂ ಮಾತ್ರ ಏನು ಪ್ರತಿಕ್ರಿಯಿಸಿಲ್ಲ. ಅರ್ಥವಾಗದವರಂತೆ ಸುಮ್ಮನೆ ದೇವಿಗೆ ಕೈಮುಗಿದು ಪ್ರಾರ್ಥಿಸಿ ಯಾಗ ಮಂಟಪದತ್ತ ತೆರಳಿದರು.