ರೆಡ್ಡಿ ಗಲಾಟೆ, ಅಷ್ಟಮಂಗಲ ತಪ್ಪಿಸಿಕೊಂಡ ಯಡ್ಡಿ
ಅಷ್ಟಮಂಗಲ ಪೂಜೆಗೆ ಹಲವರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶ್ರೀಚಾಮರಾಜೇಶ್ವರ ದೇಗುಲದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಪೂಜಾ ಕೈಂಕರ್ಯಗಳು ನಿರ್ವಿಘ್ನವಾಗಿ ಸಾಗಿದೆ. ಶ್ರೀರಾಮುಲು ರಾಜೀನಾಮೆ ಹಾಗೂ ಜನಾರ್ದನ ರೆಡ್ಡಿ ಬಂಧನದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಷ್ಟಮಂಗಲ ಪೂಜೆಯಲ್ಲಿ ಭಾಗವಹಿಸಿಲ್ಲ.
ಕುಮಾರಸ್ವಾಮಿ ಮನವಿ: ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟ ಮಂಗಲ ಧಾರ್ಮಿಕ ವಿಧಿವಿಧಾನಕ್ಕೆ ನಾಗರಿಕರು ಯಾವುದೇ ರೀತಿ ಅಡ್ಡಿ ಪಡಿಸಬಾರದು, ಪೂಜೆ ಪುರಸ್ಕಾರಕ್ಕೆ ಅಡ್ಡಿ ಮಾಡುವುದು ನಾಗರಿಕರ ಲಕ್ಷಣವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿಯ ಮನವಿಗೆ ಸ್ಪಂದಿಸಿರುವ ಪಕ್ಷದ ಕಾರ್ಯಕರ್ತರು ಮಂಗಳವಾರ ಯಾವುದೇ ಪ್ರತಿಭಟನೆಯನ್ನು ಕೈಗೊಂಡಿಲ್ಲ. ದೇಗುಲದ ಸುತ್ತಾ ಕೂಡಾ ಸುಳಿದಿಲ್ಲ.
ದುಬಾರಿ ಪೂಜೆ: ಸೋಮವಾರ 108 ತೆಂಗಿನ ಕಾಯಿಗಳ ಗಣಹೋಮ, ಮೃತ್ಯುಂಜಯ ಹೋಮ, ರಾಮತಾರಕ ಹೋಮ, ನವಗ್ರಹ ಹೋಮ, ಮಹಾ ರುದ್ರ ಹೋಮಗಳು ನಿರಾತಂಕವಾಗಿ ನೆರವೇರಿಸಲಾಯಿತು. ಸುಮಾರು 15 ಲಕ್ಷಕ್ಕೂ ಅಧಿಕ ಹಣವನ್ನು ಈ ಮಹಾ ಹೋಮ ಹವನಕ್ಕೆ ವ್ಯಯಿಸಲಾಗಿದೆ.
ದೇವಾಲಯದ ಆವರಣದಲ್ಲಿ ಕೇರಳ ತಂತ್ರಿಗಳು, ಉಡುಪಿ ಜ್ಯೋತಿಷಿಗಳು ತುಂಬಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ಸಚಿವೆ ಶೋಭಾ ಉಸ್ತುವಾರಿಕೆಯಲ್ಲಿ ನಡೆಯುತ್ತಿದೆ.