ಆರ್ಕೆ ನಾರಾಯಣ್ ಜೀವಿಸಿದ ಮನೆ ನೆಲಸಮಕ್ಕೆ ತಡೆ
ಯಾದವಗಿರಿಯಲ್ಲಿರುವ ಈ ಮನೆಯ ಸ್ಥಳದಲ್ಲಿ ಬಹುಮಹಡಿ ಐಷಾರಾಮಿ ಕಟ್ಟಡ ನಿರ್ಮಾಣವಾಗಬೇಕಿತ್ತು. ಕಾಂಟ್ರಾಕ್ಟರ್ ಕಟ್ಟಡ ಒಡೆಯುವ ಕೆಲಸವನ್ನೂ ಆರಂಭಿಸಿದ್ದ. ಅಷ್ಟರಲ್ಲಿ ಸ್ಥಳವನ್ನು ಪರಿಶೀಲಿಸಿದ ಎಮ್ಸಿಸಿ ಜಂಟಿ ನಿರ್ದೇಶಕ ಚಂದ್ರೇಗೌಡ ಅವರು, ಕಟ್ಟಡ ನೆಲಸಮ ಮಾಡುವ ಕೆಲಸವನ್ನು ಕೂಡಲೆ ನಿಲ್ಲಿಸಬೇಕೆಂದು ಆದೇಶಿಸಿದ್ದಾರೆ.
"ಆರ್ಕೆ ನಾರಾಯಣ್ ಜೀವಿಸಿದ ಈ ಮನೆಯ ಜೊತೆ ಸಾರ್ವಜನಿಕರ ಭಾವನಾತ್ಮಕ ಸಂಬಂಧವಿದೆ. ಇಲ್ಲಿ ಸ್ಮಾರಕ ನಿರ್ಮಾಣವಾಗುತ್ತದಾ ಇಲ್ಲವಾ ಅದೂ ತಿಳಿಸಿಲ್ಲ. ಆದರೆ, ಖ್ಯಾತ ಸಾಹಿತಿ ಇದ್ದ ಜಾಗವನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡುತ್ತೇವೆ" ಎಂದು ಚಂದ್ರೇಗೌಡ ಅವರು ತಿಳಿಸಿದ್ದಾರೆ.
100x120 ಅಡಿ ಇರುವ ಈ ಸ್ಥಳ ಸಿಎಸ್ ಚಂದ್ರಶೇಖರ್, ಭುವನೇಶ್ವರಿ ಮತ್ತು ಶ್ರೀನಿವಾಸ ಎಂಬುವವರ ಹೆಸರಲ್ಲಿ ನೊಂದಾವಣಿಯಾಗಿದೆ. ಮನೆ ಒಡೆದು ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಕೂಡ ಕಾರ್ಪೊರೇಷನ್ ಅನುಮತಿಯನ್ನೂ ನೀಡಿತ್ತು. ಈಗ ಹೊಸ ಕಟ್ಟಡ ನಿರ್ಮಾಣದ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿದೆ.
1990ರಲ್ಲಿ ಅನಾರೋಗ್ಯದ ಕಾರಣ ಚೆನ್ನೈಗೆ ಸ್ಥಳಾಂತರಗೊಳ್ಳುವ ಮೊದಲು ಆರ್ ಕೆ ನಾರಾಯಣ್ ಅವರು ಈ ಮನೆಯಲ್ಲಿ ಎರಡು ದಶಕಗಳ ಕಾಲ ಜೀವಿಸಿದ್ದರು. ಅನೇಕ ಜನರು ನಾರಾಯಣ್ ಅವರನ್ನು ಭೇಟಿ ಮಾಡಲು ಬಂದುಹೋಗಿ ಮಾಡುತ್ತಿದ್ದರು.
2006ರಲ್ಲಿ ನಾರಾಯಣ್ ಜನ್ಮಶತಾಬ್ದಿಯ ಸಂದರ್ಭದಲ್ಲಿ ಈ ಮನೆಯನ್ನು ಇದ್ದ ರೂಪದಲ್ಲೇ ಉಳಿಸಿಕೊಳ್ಳಬೇಕೆಂಬ ಬೇಡಿಕೆಯೂ ಎದ್ದಿತ್ತು. ಆದರೆ, ಸಂಬಂಧಪಟ್ಟವರು ಈ ಬೇಡಿಕೆಯನ್ನು ಕಿವಿಗೇ ಹಾಕಿಕೊಂಡಿರಲಿಲ್ಲ. ಮನೆಬಾಗಿಲು ಸೇರಿದಂತೆ ಕೆಲ ಭಾಗಗಳನ್ನು ಒಡೆದುಹಾಕಲಾಗಿದೆಯಾದರೂ ನೆಲಸಮ ಮಾಡಲು ತಡೆ ಒಡ್ಡಲಾಗಿದೆ.