ಚಾ.ನಗರಕ್ಕೆ ಅಂಟಿದ ಶಾಪ ವಿಮೋಚನೆಗೆ ಅಷ್ಟಮಂಗಲ
ಆ ಕಾರಣಕ್ಕಾಗಿ ಕಳೆದ 20 ವರ್ಷಗಳಿಂದ ಚಾಮರಾಜನಗರಕ್ಕೆ ಯಾವೊಬ್ಬ ಮುಖ್ಯಮಂತ್ರಿಯೂ ಬರಲು ಹಿಂಜರಿಯುತ್ತಿದ್ದಾರೆ. ಚಾಮರಾಜೇಶ್ವರ ದೇವಸ್ಥಾನದಲ್ಲಿ ಕೇರಳದ 35 ಮಂದಿ ವಿಶೇಷ ಜ್ಯೋತಿಷಿಗಳ ತಂಡ 3 ದಿನಗಳ ಅಷ್ಟಮಂಗಲ ಹೋಮ ಆರಂಭಿಸಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಅಷ್ಟಮಂಗಲ ಮಹಾಹೋಮದ ನೇತೃತ್ವ ವಹಿಸಿದ್ದು, ಅದಕ್ಕೆ ತಗಲುವ 15 ಲಕ್ಷ ರು.ಗೂ ಹೆಚ್ಚಿನ ಹಣವನ್ನು ಅವರೇ ಸ್ವತಃ ಭರಿಸಿದ್ದಾರೆ.
ಎಸ್.ಆರ್. ಬೊಮ್ಮಾಯಿ, ವಿರೇಂದ್ರ ಪಾಟೀಲ್ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ 6 ತಿಂಗಳ ಒಳಗಾಗಿ ತಮ್ಮ ಅಧಿಕಾರ ಕಳೆದುಕೊಂಡಿದ್ದರು. ಇದು ಮುಂದಿನ ಎಲ್ಲಾ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋಗಲು ಹಿಂಜರಿಯುವಂತೆ ಮಾಡಿತ್ತು.
ಅಧಿಕಾರ ಕಳೆದುಕೊಳ್ಳುವ ಭಯದಿಂದ ಕಳೆದ 20 ವರ್ಷಗಳ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರೊಬ್ಬರನ್ನು ಉಳಿದು ಯಾವೊಬ್ಬ ಮುಖ್ಯಮಂತ್ರಿಯೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಮುಖ್ಯಮಂತ್ರಿಗಳ ಚಾಮರಾಜನಗರ ಭೇಟಿಗಾಗಿ ಹಾಗೂ ಚಾಮರಾಜನಗರದ ಅಭಿವೃದ್ಧಿಗಾಗಿ ಮಾಡಿದ ಎಲ್ಲಾ ಒತ್ತಾಯಗಳನ್ನು ತಳ್ಳಿ ಹಾಕುತ್ತಲೇ ಬಂದರು.
ಅಲ್ಲದೆ 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಕರಾರಿನಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲ ತಿಂಗಳ ಮೊದಲಷ್ಟೇ ಚಾಮರಾಜನಗರಕ್ಕೆ ಭೇಟಿ ನೀಡಿದ ಕಾರಣ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದ ಅಧಿಕಾರ ಹೋಯಿತು ಎಂಬ ಪುಕಾರಿನಿಂದ ಪಾರಾಗಿದ್ದರು. ಆದರೆ ನಂತರದ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ತಮ್ಮ ಎರಡೂವರೆ ವರ್ಷದ ಅಧಿಕಾರ ಅವಧಿಯಲ್ಲಿ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಲೇ ಇಲ್ಲ.
ಸಹಜವಾಗಿ ಇದು ಚಾಮರಾಜನಗರದ ಜನರ ಸಹನೆಯನ್ನು ಕೆಣಕಿತ್ತು. ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಪಕ್ಷಗಳು ಬೀದಿಗಿಳಿದು ಹೋರಾಟ ನಡೆಸಿದವು. ವಾಟಾಳ್ ನಾಗರಾಜ್ ಅವರಂತೂ ಮುಖ್ಯಮಂತ್ರಿ ತಿಂಗಳೊಳಗೆ ಚಾಮರಾಜನಗರಕ್ಕೆ ಭೇಟಿ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದರು. ಗಡಿ ಜಿಲ್ಲೆ ಚಾಮರಾಜನಗರವನ್ನು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುವ ಬೆದರಿಕೆಯನ್ನು ಒಡ್ಡಿದ್ದಾರೆ. [ರೂವಾರಿ ಶೋಭಾ ಕರಂದ್ಲಾಜೆ]