ಆಂಕೋಲಾ ಹನಿ ಬೀಚಿನಲ್ಲಿ ಬೆಂಗಳೂರು ಕುಟುಂಬ ನೀರುಪಾಲು
ಬೆಂಗಳೂರಿನ ವೈಟ್ಫೀಲ್ಡ್ ನಿವಾಸಿ, ಮೂಲತಃ ಹೈದರಾಬಾದ್ನ ಪ್ರವೀಣ ನೇವಿತಾ (35), ಪತ್ನಿ ಸಂಜಲಿ ಪ್ರವೀಣ ನೇವಿತಾ (30), ಅಮಿತ ವಿಷ್ಣುಕುಮಾರ ಮುರಾರ್ಕ (35) ಇವರೇ ಸಮುದ್ರದ ಅಲೆಗೆ ಸಿಕ್ಕು ಮೃತರಾದವರು. ಪ್ರವೀಣ ನೇವಿತಾ ಮತ್ತು ಸಂಜಲಿ ಪ್ರವೀಣ ಅವರ ಮಗಳು ದಿವ್ಯಾ, ಅಮಿತ ವಿಷ್ಣುಕುಮಾರ ಮುರಾರ್ಕ ಅವರ ಪುತ್ರಿ ಮೂರು ವರ್ಷದ ಅನುಷ್ಕಾಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾಗಿರುವ ಇವರು ಶುಕ್ರವಾರ ಮುಂಜಾನೆ ತಾಲೂಕಿನ ಹೊನ್ನೆಬೈಲ್ ರೆಸಾರ್ಟ್ಗೆ ಆಗಮಿಸಿದ್ದರು. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ವಿಹಾರಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಈ ಅವಘಡ ಸಂಭವಿಸಿದೆ.
ಸಮುದ್ರ ತೀರ ಸಂಚರಿಸಿ ಪುನಃ ರೆಸಾರ್ಟ್ಗೆ ಸಮುದ್ರದ ಅಂಚಿನಲ್ಲಿರುವ ಬಂಡೆಗಲ್ಲಿನ ಮೇಲಿನಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಸಮುದ್ರ ಅಲೆಯ ರಭಸಕ್ಕೆ ಆಯತಪ್ಪಿ ಮೂವರು ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಸ್. ರಮೇಶ, ತಹಶೀಲ್ದಾರ ಡಾ. ಉದಯಕುಮಾರ ಶೆಟ್ಟಿ, ಸಿ.ಪಿ.ಐ. ಶಿವಾನಂದ ಚಲವಾದಿ, ಪಿ.ಎಸ್.ಐ. ಜಾಯ್ ಅಂಥೋನಿ ಆಗಮಿಸಿ ಪರಿಶೀಲಿಸಿದ್ದಾರೆ.
ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಪೊಲೀಸರು ನಾಪತ್ತೆಯಾದವರ ಹುಡುಕಾಟ ನಡೆಸಿದ್ದಾರೆ. ಈ ಬೀಚ್ನಲ್ಲಿ ಇಂತಹ ಅವಘಡ ಸಂಭವಿಸಿದ್ದು ಇದೇ ಮೊದಲ ಬಾರಿಯಾಗಿದ್ದು, ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಗಾಳಿಯ ಅಬ್ಬರದಿಂದಾಗಿ ಸಮುದ್ರದ ಅಲೆಗಳು ರಭಸದಿಂದ ಕೂಡಿದ್ದು, ಸ್ಥಳೀಯ ಮೀನುಗಾರರು ಕಡಲಿಗಿಳಿಯಲು ಹಿಂಜರಿಯುತ್ತಿದ್ದಾರೆ. ಆದರೆ ಪ್ರವಾಸಕ್ಕೆಂದು ಬಂದ ಐವರು ವಿಹಾರಕ್ಕೆಂದು ತೆರಳಿದ ಸಂದರ್ಭದಲ್ಲಿಯೇ ಕಡಲ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.