ಪ್ರಾಮಾಣಿಕತೆ: ಈ ಎರಡು ದಂತಕಥೆಗಳ ಹೆಗ್ಗುರುತು
ಅಣ್ಣಾ ಹಜಾರೆಯವರು ಒಂದು ಸಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ನಂತರ ಮನಸು ಬದಲಾಯಿಸಿ, 15 ವರ್ಷ ಭಾರತೀಯ ಸೈನ್ಯದಲ್ಲಿ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸಿ ತಮ್ಮ ಜೀವನವನ್ನು ದೇಶ ಸೇವೆಗೆ ಮುಡುಪಾಗಿಟ್ಟಿದ್ದರು. ತಮ್ಮ ನಿವೃತ್ತಿ ಜೀವನದ ನಂತರ ತಮ್ಮ ಸ್ವಂತ ಊರಾದ ಮಹರಾಷ್ಟ್ರದ ಬರ ಪೀಡಿತ ಗ್ರಾಮವಾದ ರಾಲೆಗಾಂವ್ ಸಿದ್ದಿಗೆ ಹೋಗಲು ನಿರ್ಧರಿಸಿದ್ದರು. ತದನಂತರ ರಾಲೆಗಾಂವ್ ಸಿದ್ದಿ ಗ್ರಾಮವನ್ನು ಅಹಮದ್ ನಗರ ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಿದರು.
ಕುಡಿತ, ಬಡತನ, ಅನಕ್ಷರತೆಯ ದಾಸ್ಯಕ್ಕೆ ಸಿಲುಕಿ ನರುಳುತ್ತಿದ್ದ ಅಲ್ಲಿಯ ಜನರೊಳಗೆ, ಸಾಕ್ಷರತೆ, ನೈರ್ಮಲ್ಯ, ಮೌಲ್ಯಗಳನ್ನು ತುಂಬಿದ್ದಲ್ಲದೇ ಕುಡಿತದ ಚಟ ಇರುವವರನ್ನು ನಯದಿಂದ ತಿದ್ದಿ, ಬಗ್ಗದವರನ್ನು ಶಿಕ್ಷೆಯಿಂದ ದಾರಿಗೆ ತಂದು ಆದರ್ಶ ಗ್ರಾಮವನ್ನಾಗಿಸಲು ದುಡಿದವರು. ಈಗ ಈ ಪುಟ್ಟ ಗ್ರಾಮ ದೇಶದಲ್ಲೇ ಶ್ರೀಮಂತ ಹಾಗೂ ಮಾದರಿ ಗ್ರಾಮವಾಗಿ ಪ್ರಚಲಿತಗೊಂಡಿದೆ. ಸೌರಶಕ್ತಿಯ ಬಳಕೆಯ ಮೂಲಕ ಇಂಧನ ಉಳಿತಾಯದಂತಹ ಸದುದ್ದೇಶಗಳನ್ನು ಪ್ರೇರೇಪಿಸಿದ ಈ ಸಮಾಜ ಸೇವಕ ಸದಾ ದೇಶದ ಸರ್ವತೋಮುಖ ಏಳಿಗೆಯನ್ನು ಬಯಸಿದವರು.