ಮರೆತುಹೋದ ಶಾಸ್ತ್ರಿಯನ್ನು ನೆನಪಿಸಿದ ಅಣ್ಣಾ ಹಜಾರೆ
ಅಣ್ಣಾ ಅವರ ಸರಳಾತಿ ಸರಳ ಜೀವನ, ನಿಷ್ಕಳಂಕ ವ್ಯಕ್ತಿತ್ವ, ಪ್ರಾಮಾಣಿಕತೆ, ನೇರವಂತಿಕೆ, ತ್ಯಾಗ ಅಹಿಂಸಾ ಮನೋಭಾವ, ಅವರ ದಿರಿಸು, ಅವರ ನೋಟ, ಅವರ ದೇಶಪ್ರೇಮ, ಇಂದಿನ ದಿನ ಮರೆತೇಹೋಗಿರುವ ಭಾರತದ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹಾದೂರ್ ಶಾಸ್ತ್ರಿಯ(1904-1966)ವರನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಶಾಸ್ತ್ರೀಯವರು 'ಜೈ ಜವಾನ್ ಜೈ ಕಿಸಾನ್' ಅಂದಿದ್ದರೆ, ಅಣ್ಣಾ ಕೂಡ 'ರೈತರಿಲ್ಲದಿದ್ದರೆ ಈ ದೇಶವೇ ಇಲ್ಲ' ಎಂಬ ಸಂದೇಶ ಇಡೀ ದೇಶಕ್ಕೆ ರವಾನಿಸಿದ್ದಾರೆ.. ಶಾಸ್ತ್ರೀಜಿಯಂಥ ವ್ಯಕ್ತಿಯೊಬ್ಬರು ನಮ್ಮ ಕಣ್ಣಮುಂದಿರುವುದು ನಿಜಕ್ಕೂ ನಮ್ಮ ಸೌಭಾಗ್ಯವೇ ಸರಿ.
ಕೆಲ ದಿನಗಳ ನಂತರ ಅಥವಾ ಕೆಲ ವರ್ಷಗಳ ನಂತರ ಲಾಲ್ ಬಹಾದೂರ್ ಶಾಸ್ತ್ರಿಯವರು ಜನಮಾನಸದಿಂದ ಮರೆತುಹೋದಂತೆ ಅಣ್ಣಾ ಹಜಾರೆಯವರು ಕೂಡ ಮರೆತುಹೋದರೆ ಆಶ್ಚರ್ಯವಿಲ್ಲ. ಶಾಸ್ತ್ರೀಜಿಯವರ ಜನುಮದಿನ ಮಹಾತ್ಮಾ ಗಾಂಧೀಜಿಯವರ ಜನುಮದಿನದಂದೇ ಇದೆ ಎಂದು ಎಷ್ಟು ಜನರಿಗೆ ಗೊತ್ತಿದೆ? ಗೊತ್ತಿದ್ದರೂ ಎಷ್ಟು ಜನ ಅಷ್ಟೇ ಶ್ರದ್ಧೆಯಿಂದ ಆಚರಿಸುತ್ತಾರೆ? ಭ್ರಷ್ಟಾಚಾರದ ವಿರುದ್ಧ ಇಡೀ ದೇಶವನ್ನು ಬಡಿದೆಬ್ಬಿಸಿರುವ ಅಣ್ಣಾ ಹಜಾರೆ ವಿಷಯದಲ್ಲಿ ಹಾಗಾಗದಿರಲಿ ಎಂಬುದಷ್ಟೇ ನಮ್ಮ ಆಶಯ.