ಕರಾವಳಿಯಲ್ಲಿ ಗಣೇಶೋತ್ಸವಕ್ಕೆ ತಣ್ಣೀರು ಎರಚಿದ ಮಳೆರಾಯ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ನಿರಂತರ ಮಳೆ ಸುರಿಯುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಸುಮಾರು ಆರುನೂರಕ್ಕು ಹೆಚ್ಚು ಕಡೆಗಳಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ. ಸುಮಾರು ಎರಡು ತಿಂಗಳುಗಳಿಂದ ಈ ಉತ್ಸವಕ್ಕಾಗಿ ಸಾರ್ವಜನಿಕ ಸಂಘ ಸಂಸ್ಥೆಗಳು ಮಾಡಿದ್ದ ತಯಾರಿ ಮಳೆ ಕಾಟದಿಂದಾಗಿ ನೀರಲ್ಲಿ ಹೋಮ ಮಾಡಿದಂತಾಗಿದೆ.
ಹಣ್ಣು, ಹೂವು ತರಕಾರಿಗಳ ಬೆಲೆಯಂತೂ ಅತ್ಯಂತ ದುಬಾರಿಯಾಗಿವೆ. ಒಂದು ಮೊಳ ಸೇವಂತಿಗೆ ಹೂವಿಗೆ 30 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ತರಕಾರಿ ಬೆಲೆಯಂತೂ ಗಗನಕ್ಕೇರಿದೆ. ಕೆಲವು ಕಡೆಗಳಲ್ಲಿ ಇಂದು ಒಂದು ದಿನ ಮಾತ್ರ ಗಣೇಶನ ಪ್ರತಿಷ್ಠಾಪನೆ ಮಾಡಿ ನಂತರ ಅದ್ದೂರಿ ಶೋಭಾ ಯಾತ್ರೆ ಮೂಲಕ ವಿಸರ್ಜನೆ ಮಾಡಲಾಗುತ್ತದೆ. ನಿರಂತರ ಮಳೆ ಸುರಿದರೆ ಶೋಭಾ ಯಾತ್ರೆಯೂ ಕಳೆಗುಂದಲಿದೆ.
ಸಾರ್ವಜನಿಕ ಗಣೇಶನ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರನ್ನು ಮುಂಗಡ ಬುಕ್ ಮಾಡಿದ್ದರು. ಆದರೆ ಭಾರೀ ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಸಹಜವಾಗಿಯೇ ಆಯೋಜಕರಿಗೆ ಮತ್ತು ಕಲಾವಿದರಿಗೆ ನಿರಾಸೆಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ದುಬಾರಿ ಹಣ ತೆತ್ತು ತಗಡಿನ ಶೀಟು ಹಾಕಿಸಿದ್ದರೂ ಮಳೆಯ ಆರ್ಭಟಕ್ಕೆ ಹೆದರಿ ಜನ ಬಾರದಿದ್ದರೆ ಪ್ರಯೋಜನವೇನು? ಎನ್ನುವುದು ಸಂಘಟಕರ ಪ್ರಶ್ನೆ.