ಭ್ರಷ್ಟಾಚಾರ ಬಯಲಿಗೆಳೆದು ತಪ್ಪು ಮಾಡಿದೆ: ದಯಪಾಲಿಸೋ ಮರಣವಾ
- ಕೆಜಿಎಫ್ ಶಾಸಕ ವೈ.ಸಂಪಂಗಿ ವಿರುದ್ಧ ಲೋಕಾಯುಕ್ತ ದಾಳಿಗೆ ಕಾರಣರಾದ ಫಿರ್ಯಾದಿ ಹುಸೇನ್ ಮೊಯೀನ್ ಫಾರೂಕ್ ದಯಾಮರಣ ಕೋರಿ ರಾಷ್ಟ್ರಪತಿಗೆ ಸಲ್ಲಿಸಿರುವ ಮನವಿಪತ್ರದ ಸಾಲುಗಳಿವು. ಪ್ರಜಾವಾಣಿ ಪತ್ರಿಕೆಯಲ್ಲಿ ಬುಧವಾರ ಈ ಕುರಿತು ಸವಿವರ ವರದಿ ಪ್ರಕಟವಾಗಿದೆ.
ಲೋಕಾಯುಕ್ತ ದಾಳಿ ನಡೆದ ದಿನದಿಂದಲೂ ಸಂಪಂಗಿ ಅವರ ರಕ್ಷಣೆಗೆ ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ, ಪೊಲೀಸ್ ಅಧಿಕಾರಿಗಳು ನಿತ್ಯವೂ ಕಿರುಕುಳ ನೀಡುತ್ತಿರುವುದರಿಂದ ಸಾಯಬೇಕೆನಿಸಿದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡಿದ ಏಕೈಕ ಕಾರಣದಿಂದ ಈ ಹಿಂಸೆಯನ್ನು ಅನುಭವಿಸುತ್ತಿರುವೆ. ಇನ್ನೂ ಸಹಿಸಿಕೊಂಡಿರಲು ಸಾಧ್ಯವಿಲ್ಲ.
ಆತ್ಮಹತ್ಯೆ ಕಾನೂನಿಗೆ ವಿರುದ್ಧವಾಗಿರುವುದರಿಂದ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಅವರು ಇದೇ 26ರಂದು ರಾಷ್ಟ್ರಪತಿಗೆ ಸಲ್ಲಿಸಿರುವ ಪತ್ರದಲ್ಲಿ ಕೋರಿದ್ದಾರೆ.
ಮನವಿ ಪತ್ರದ ಜೊತೆಗೆ ಶಾಸಕ ಸಂಪಂಗಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ಹೆಸರು, ನ್ಯಾಯಾಧೀಶರ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ನಿತ್ಯವೂ ಆದ ಹಿಂಸೆಯ ಕುರಿತು ಮಾಹಿತಿಯುಳ್ಳ ಖಾಸಗಿ ಡೈರಿಯನ್ನೂ ಕೂಡ ಸಲ್ಲಿಸಿದ್ದಾರೆ.