ಸುದ್ದಿ ಸೋಜಿಗ : ಇಲ್ಲಿ ಕೋಳಿಗಳೂ ಇಲ್ಲ, ಆಮ್ಲೇಟೂ ಇಲ್ಲ
ಇದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಸಮೀಪದ ಅವಳಿ ಗ್ರಾಮಗಳ ರೋಚಕ ಕಥೆ. ಒಂದು ಬೋರೇನಹಳ್ಳಿ, ಮತ್ತೊಂದು ಶೀರನಾಯಕನಹಳ್ಳಿ. ಹಿಂದಿನ ಕಾಲದಲ್ಲಿ 'ಕೋಳಿ ಕೂಗುವ ಹೊತ್ತಿಗೆ, ಎಚ್ಚರದ ಕರಗಂಟೆ" ಎಂದೆಲ್ಲಾ ಜನರ ಆಡು ಭಾಷೆಯಲ್ಲಿ ಕೇಳುತ್ತಿದ್ದೆವು. ಆದರೆ, ಈ ಊರುಗಳಲ್ಲಿ ದಶಕಗಳಿಂದ ಈ ಮಾತುಗಳೇ ಇಲ್ಲ. ಏನಿದ್ದರೂ ಬರೀ ಕೋಳಿಯ ಕೂಗಿನ ಕಲ್ಪನೆ, ಮಾತು.
ಈ ಅವಳಿ ಗ್ರಾಮಗಳಲ್ಲಿ ಕುರುಬರದ್ದೇ ಪ್ರಾಬಲ್ಯ. ಕುರುಬ ಜನಾಂಗದ್ದೇ ಅಧಿಪತ್ಯ. ಸಾವಿರಗಟ್ಟಲೆ ಇರುವ ಕುರಿ, ಮೇಕೆಗಳೇ ಇವರ ಆಸ್ತಿ, ಅಂತಸ್ತು. ಕುರಿ - ಮೇಕೆಗಳಿರುವ ಊರಲ್ಲಿ ಕೋಳಿಗಳೇ ಇಲ್ಲವೆನ್ನಲು ಕಾರಣವೂ ಇದೆ. ಅದರ ಹಿಂದೆಯೂ, ದಶಕಗಳ ಹಿಂದಿನ ಸ್ವಾರಸ್ಯಕರ ಕಥಾನಕವಿದೆ.
ಅವಳಿ ಗ್ರಾಮಗಳಲ್ಲಿ ಪ್ಲೇಗು, ಸಿಡುಬು, ಕಾಲರ, ದಡಾರದಂಥಹ ಕಾಯಿಲೆಗಳು ಕಾಣಿಸಿಕೊಂಡು ಜನ ಸಾಲು ಸಾಲಾಗಿ ಮರಣಹೊಂದುತ್ತಿದ್ದರು. ಗ್ರಾಮಸ್ಥರು ಒಂದೆಡೆ ಸೇರಿ ಊರಮ್ಮ ಮಾಯಮ್ಮದೇವಿಯ ಮೊರೆ ಹೋದಾಗ 'ನೀವು ಕೋಳಿ ಸಾಕುವುದನ್ನು ಬಿಡಿ, ಗ್ರಾಮವನ್ನು ನಾನು ರಕ್ಷಿಸುತ್ತೇನೆ" ಎಂದಿದ್ದಳಂತೆ. ಅವಳಿ ಗ್ರಾಮಸ್ಥರು ಮಾಯಮ್ಮಳ ಮಾತಿನಂತೆ ಇಂದಿಗೂ ಕೋಳಿ ಸಾಕುವುದಿಲ್ಲ.
ದಶಕಗಳ ಹಿಂದಿನ ಊರಮ್ಮ ಮಾಯಮ್ಮಳ ಮಾತನ್ನು ಅವಳಿ ಗ್ರಾಮಸ್ಥರು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ. ಎರಡೂ ಊರುಗಳ ಮಧ್ಯೆ ಕೊಡುಕೊಳ್ಳುವ, ಪರಸ್ಪರ ಬೈಯ್ದುಕೊಳ್ಳುವ ಕೆಲಸ ನಡೆದೇ ಇದೆ. ಕಂದಾಯ ಗ್ರಾಮಗಳಾಗಿರುವ ಈ ಎರಡೂ ಗ್ರಾಮಗಳಲ್ಲಿ ಇರುವ ಎಲ್ಲರೂ ಬೀಗರು - ಬಿಜ್ಜರು, ಸಹೋದರರೇ ಎನ್ನುವುದು ವಿಶೇಷ.
ಇಲ್ಲಿ ಇನ್ನೊಂದು ವಿಶೇಷವಿದೆ. ಅವಳಿ ಗ್ರಾಮದ ಅನೇಕರು ಕೋಳಿಗಳನ್ನು ಸಾಕುವುದಿಲ್ಲವಾದರೂ, ತಿನ್ನಲಿಕ್ಕಾಗಿ ಆಗಾಗ ತರುತ್ತಿರುತ್ತಾರೆ. ತಂದ ಕೋಳಿ ಕೂಗುವ ಮೊದಲೇ ಚಿಕನ್ ಬಿರಿಯಾನಿ ಮಾಡಿ ತಿಂದುಬಿಡುತ್ತಾರೆ.