ರಾಜೀವ್ ಹಂತಕರ ಪರ ರೊಚ್ಚಿಗೆದ್ದ ಯುವತಿ ಆತ್ಮಾಹುತಿ
ಈ ಮಧ್ಯೆ ಅಪರಾಧಿಗಳಾದ ಮುರುಗನ್, ಸಾಂತನ್ ಮತ್ತು ಪೆರರಿವಾಳನ್ ಅವರನ್ನು ಸೆ.9ರಂದು ನೇಣುಗಂಬಕ್ಕೇರಿಸುವಂತಿಲ್ಲ ಎಂದಿರುವ ಮದ್ರಾಸ್ ಹೈಕೋರ್ಟ್ ಎಂಟು ತಿಂಗಳ ಕಾಲ ತಡೆಯಾಜ್ಞೆ ನೀಡಿದೆ.
ರೊಚ್ಚಿಗೆದ್ದ ಅಪರಾಧಿಗಳ ಬೆಂಬಲಿಗರು: ಮೂವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿರುವುದನ್ನು ವಿರೋಧಿಸಿ ಮಹಿಳೆಯೊಬ್ಬಳು ಕಾಂಚಿಪುರಂನ ಸರ್ಕಾರಿ ಕಚೇರಿಯೊಂದರ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಸೆಂಕೋಡಿ ಎಂಬ ಹೆಸರಿನ 27ರ ಹರೆಯದ ಆ ಮಹಿಳೆ ಆಸ್ಪತ್ರೆಯ ಹಾದಿಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಕಾಂಚಿಪುರಂನಲ್ಲಿ ಸೆಂಕೋಡಿಯ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಸೆಂಕೋಡಿ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಹರಿದ್ರಾ ಅಪೀಲ್ : ಈ ನಡುವೆ ಆರೋಪಿಗಳಲ್ಲಿ ಒಬ್ಬರಾದ ಎ.ಜಿ. ಪೆರರಿವಾಲನ್ ಅಲಿಯಾಸ್ ಅರಿವು ತಾನು ಶಿವರಸನ್ನ ಜತೆಗಿದ್ದೆ ಆದರೆ ಹೊರತು ನೇರವಾಗಿ ಹತ್ಯೆಯಲ್ಲಿ ಭಾಗವಹಿಸಿರಲಿಲ್ಲ ಎಂದಿದ್ದಾನೆ.
ನಳಿನಿ ಹಾಗೂ ಮುರುಗನ್ ಪುತ್ರಿ ಹರಿದ್ರಾ ಎಂಬಾಕೆ ತನ್ನ ತಂದೆಯನ್ನು ಕ್ಷಮಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾರಿಗೆ ಪತ್ರ ಬರೆದಿದ್ದಾಳೆ. ಲಂಡನ್ ನಲ್ಲಿ ವಾಸವಾಗಿರುವ ಈಕೆ ಇಂಗ್ಲೆಂಡ್ ನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ಹೇಳಿದ್ದಾಳೆ.
ಈ ನಡುವೆ ಚೆನ್ನೈನ ಸೇದಪೇಟ್ ಪ್ರದೇಶದಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಯನ್ನು ಯಾರೋ ದುಷ್ಕರ್ಮಿಗಳು ಜಜ್ಜಿ, ವಿರೂಪಗೊಳಿಸಿದ ಘಟನೆ ವರದಿ ಬಂದಿದೆ.