ಜೈಲಿಗಿಂತ ಆಸ್ಪತ್ರೆಯ ಹಾಸಿಗೆಯೇ ಲೇಸು ಸರ್ವಜ್ಞ
ಗಟ್ಟಿಮುಟ್ಟಾಗಿ, ಗುಂಡಗುಂಡಗೆ ಓಡಾಡುತ್ತಿದ್ದಂಥವರೆಲ್ಲ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೆಲವರಿಗೆ ಭಯಂಕರ ಜ್ವರ ಬಂದುಬಿಟ್ಟರೆ, ಕೆಲವರ ಹೃದಯದ ಬಡಿತ ಏರುಪೇರಾಗತೊಡುತ್ತಿದೆ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ ಡಾಕ್ಟರ್ ಪ್ರಿಸ್ಕ್ರಿಪ್ಶನ್, ವೈದ್ಯರ ಸರ್ಟಿಫಿಕೇಟ್ ಮತ್ತು ಅವರು ಕೊಟ್ಟಿರುವ ಗುಳಿಗೆಗಳ ಸಮೇತ ನ್ಯಾಯಾಲಯದ ಮುಂದೆ ಜೋಲುಮುಖ ಹಾಕಿಕೊಂಡು ನಿಲ್ಲುತ್ತಿದ್ದಾರೆ. ಯಡಿಯೂರಪ್ಪನವರಂತೂ ವಿಚಾರಣೆಯ ದಿನಾಂಕ ಮುಂದೂಡುತ್ತಿದ್ದಂತೆ ಆಸ್ಪತ್ರೆಯ ದಾರಿ ಹಿಡಿಯುವ ಬದಲು ಸಿನೆಮಾ ಥಿಯೇಟರಿಗೆ ನುಗ್ಗಿದರು.
ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ, ಡಿ-ನೋಟಿಫಿಕೇಷನ್ ಮುಂತಾದ ಹಗರಣಗಳಲ್ಲೆಲ್ಲ ಸಿಲುಕಿರುವ ಕೋಟೆ ಕಟ್ಟಿ ಮೆರೆದೋರೆಲ್ಲ ಬೆಚ್ಚಿಬಿದ್ದಿದ್ದಾರೆ. ಎಂತೆಂಥವರೆಲ್ಲ ಜೈಲು ಕಂಡಿದ್ದಾರೆ ಇನ್ನೂ ನೀನ್ಯಾವ ಲೆಕ್ಕ ಹೇಳು ಎಂಬಂತೆ, ಕೋರ್ಟಿಗೆ ಹಾಜರಾಗಲೇಬೇಕು ಎಂದು ನ್ಯಾಯಾಧೀಶರು ಕಟ್ಟಪ್ಪಣೆ ಮಾಡುತ್ತಿದ್ದಾರೆ. ಜೈಲೇ ಗತಿಯಾದರೂ ಆಸ್ಪತ್ರೆಯಲ್ಲಿ ಬೇಕಾದ್ದಂಥ ಚಿಕಿತ್ಸೆ ಕೊಡುತ್ತೇವೆ, ಸುಮ್ಮನೆ ಕಟಕಟೆಗೆ ಬನ್ನಿ ಎಂದು ನಾಯಕರಿಗೆ ನ್ಯಾಯಾಧೀಶರು ತಾಕೀತು ಮಾಡುತ್ತಿದ್ದಾರೆ.
ಪ್ರತಿದಿನ ತಪ್ಪದೆ ಅರ್ಧ ಗಂಟೆ ವಾಕಿಂಗ್ ಮಾಡುವ ಯಡಿಯೂರಪ್ಪನವರಿಗೆ ಇದ್ದಕ್ಕಿದ್ದಂತೆ ಭಯಂಕರ ಜ್ವರ, ಮಧುಮೇಹದ ತೊಂದರೆ, ಇನ್ನೂ ಏನೇನೋ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎದೆನೋವು, ಅಧಿಕ ರಕ್ತದೊತ್ತಡ ಮತ್ತು ಅವರ ಧರ್ಮಪತ್ನಿ ಅನಿತಾ ಅವರಿಗೆ ಕೆಂಡದಂಥ ಜ್ವರ, ಸಂಧಿವಾತ, ಸ್ಲಿಪ್ ಡಿಸ್ಕ್ ಇತ್ಯಾದಿ ಇತ್ಯಾದಿ. ಈಗಾಗಲೆ ಜೈಲಿನ ಮುದ್ದೆ ರುಚಿ ಕಂಡಿರುವ ಕಟ್ಟಾ ಸುಬ್ರಮಣ್ಯ ನಾಯ್ಡುವಿಗೆ ರಕ್ತ ಬೇಧಿ, ಕುತ್ತಿಗೆಗೆ ಆಪರೇಷನ್.
ಇನ್ನು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಸೊರಬದ ಶಾಸಕ ಹರತಾಳು ಹಾಲಪ್ಪ, ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದ ಕೆಜಿಎಫ್ ಶಾಸಕ ಸಂಪಂಗಿ ಮುಂತಾದವರೆಲ್ಲ ಜೈಲು ಸೇರುವ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಎಡತಾಕಿ ಬಂದವರೆ. ಈ ಹಗರಣಗಳಲ್ಲೆಲ್ಲ ಭಾಗಿಯಾದವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿ ಎಳೆದುಕೊಳ್ಳುತ್ತಿದೆ. ಇನ್ನೂ ಅನೇಕರಿಗೆ ಇದ್ದಕ್ಕಿದ್ದಂತೆ ಕಸಾರಿಕೆ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ.