ಅನೈತಿಕ ಸಂಬಂಧ : ಪೇದೆಯ ಬರ್ಬರ ಹತ್ಯೆ
ಗ್ರಾಮೀಣ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕೊಲೆಯಾದ ಮಾಜಿ ಪೊಲೀಸ್ ಪೇದೆ ರಾಮಚಂದ್ರ (40). ಈತನು ದೇವೀನಗರದಲ್ಲಿ ಓರ್ವ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರಕ್ಕಾಗಿ ಆ ಮಹಿಳೆಯ ಸಹೋದರ ಹಾಗೂ ಭತ್ರಿಯ ಪಟ್ಟಾಭಿ ಎನ್ನುವ ಆರೋಪಿಯ ನೇತೃತ್ವದ ಗುಂಪು ರಾಮಚಂದ್ರನಿಗೆ ಪ್ರಾಣಬೆದರಿಕೆ ಹಾಕಿ ಅನೈತಿಕ ಸಂಬಂಧ ಬಿಡಬೇಕು ಎಂದು ಬೆದರಿಸಿದ್ದರು.
ಪಟ್ಟಾಭಿಯ ಬೆದರಿಕೆಯಿಂದ ಆಕ್ರೋಶಗೊಂಡಿದ್ದ ರಾಮಚಂದ್ರ, ತನ್ನ ಆಪ್ತರ ಜೊತೆಯಲ್ಲಿ ಮಾರಕಾಸ್ತ್ರಗಳಿಂದ ಭತ್ರಿಗೆ ಸೋಮವಾರ ರಾತ್ರಿ ಆಗಮಿಸಿ ಪಟ್ಟಾಭಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದ. ಪಟ್ಟಾಭಿ ನೇತೃತ್ವದ ಯುವಕರ ತಂಡ ಈ ಮಾಹಿತಿ ಮೊದಲೇ ಪಡೆದಿದ್ದ ಕಾರಣ ರಾಮಚಂದ್ರನ ಮೇಲೆ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ರಾಮಚಂದ್ರ ಜೀವಂತವಾಗಿದ್ದಾಗಲೇ ಗೋಣಿಚೀಲದಲ್ಲಿ ಹಾಕಿ ಕಾಲುವೆಗೆ ಹರಿಬಿಡಲು ಯೋಜಿಸಿದ್ದರು. ಆದರೆ, ಗೋಣಿಚೀಲದಲ್ಲಿದ್ದ ರಾಮಚಂದ್ರ ಕಿರುಚುತ್ತಿದ್ದ ಕಾರಣ ಆತನ ಕುತ್ತಿಗೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಿ ಗೋಣಿಚೀಲದಲ್ಲೇ ಶವವನ್ನು ಕರಿಮಾರೆಮ್ಮ ಗುಡಿಯ ಸಮೀಪದ ಗುಡ್ಡದ ಬಯಲು ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿದ್ದಾರೆ.
ಭತ್ರಿಯಲ್ಲಿ ಸೋಮವಾರ ಈರಣ್ಣ ದೇವರ ಉತ್ಸವ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕಾಗಿ ಹೋಗಿದ್ದ ಪೊಲೀಸರು ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ರಾತ್ರೋರಾತ್ರಿ ಕೊಲೆ ಮಾಡಿದ ಆರೋಪಿಗಳನ್ನು ಶೋಧಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ, ಪ್ರಮುಖ ಆರೋಪಿ ಪಟ್ಟಾಭಿಯ ಸಹೋದರ ಮತ್ತು ಅತ್ತಿಗೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಪಟ್ಟಾಭಿಯ ಮನೆಗೆ ಕೆಎಸ್ಸಾರ್ಪಿ ತುಕಡಿಯನ್ನು ಹಾಕಿ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. ಭತ್ರಿಯಲ್ಲಿ ಪ್ರಸ್ತುತ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಗಸ್ತು ಹೆಚ್ಚಾಗಿದೆ.