ಜಾಮೀನು ಸಿಕ್ಕಿದರೆ ಯಡಿಯೂರಪ್ಪ ಪಾಲಿಗೆ ದೊಡ್ಡ ವಿಜಯ
ಒಂದು ವೇಳೆ ಹೈಕೋರ್ಟ್ ಯಡಿಯೂರಪ್ಪನವರಿಗೆ ಜಾಮೀನು ನೀಡಲು ನಿರಾಕರಿಸಿದರೆ ಲೋಕಾಯುಕ್ತ ಕೋರ್ಟ್ ಮುಂದೆ ಹಾಜರಾಗಲೇಬೇಕು. ಅದು ಕೂಡ ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಸಲ ಕಟೆಕಟೆಗೆ ಬಂದು ನಿಲ್ಲಬೇಕು. ಆದರೆ, ಹೈಕೋರ್ಟ್ನಿಂದ ಜಾಮೀನು ಸಿಗುವ ಬಗ್ಗೆ ಅವರಿಗೆ ಅನುಮಾನ ಕಾಡತೊಡಗಿದೆ. ಇದೇ ಕಾರಣಕ್ಕೆ ಯಡಿಯೂರಪ್ಪ ಈಗ ಅನಾರೋಗ್ಯದ ಕಾರಣ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯಡಿಯೂರಪ್ಪ ನಗರದ ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೆ ಸೋಮವಾರ ಖುದ್ದು ಹಾಜರಾಗುವರೇ, ಇಲ್ಲವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ. ಮಧುಮೇಹ, ರಕ್ತದೊತ್ತಡ ಹೆಚ್ಚಾಗಿದ್ದರಿಂದ ಹಾಗೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿರುವ ಅವರು ಭಾನುವಾರವೂ ಆಸ್ಪತ್ರೆ ವಾಸ ಮುಂದುವರಿಸಿದರು.
ಶನಿವಾರ ಖುದ್ದು ಲೋಕಾಯುಕ್ತ ಕೋರ್ಟ್ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರೂ, ಜ್ವರ, ಬಿಪಿ-ಶುಗರ್ ಕಾರಣ ನೀಡಿ ಗೈರು ಹಾಜರಾಗಿದ್ದರು. ಅವರ ಗೈರು ಹಾಜರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್, ಸೋಮವಾರ ತಪ್ಪದೆ ಕೋರ್ಟ್ಗೆ ಬರುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಅಂಥದ್ದರಲ್ಲಿ, ಸೋಮವಾರವೂ ಅನಾರೋಗ್ಯದ ಕಾರಣ ಹೇಳಿ ಕೋರ್ಟ್ಗೆ ಗೈರು ಹಾಜರಾದರೆ, ನ್ಯಾಯಾಲಯ ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಲೋಕಾಯುಕ್ತ ನ್ಯಾಯಾಲಯದಲ್ಲಿ ಭೂಗರಣ, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಯಡಿಯೂರಪ್ಪ ವಿರುದ್ಧ ಈಗಾಗಲೇ 5ಕ್ಕೂ ಹೆಚ್ಚು ದೂರು ದಾಖಲಾಗಿದ್ದು, ಕೆಲವು ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಅವೆಲ್ಲದಕ್ಕೂ ತಡೆ ನೀಡುವಂತೆ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಈ ಸಂಬಂಧ ಯಡಿಯೂರಪ್ಪ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ಈಗಾಗಲೇ ತಳ್ಳಿ ಹಾಕಿವೆ.
ಆ ಮೂಲಕ ಲೋಕಾಯುಕ್ತ ನ್ಯಾಯಾಲಯದಲ್ಲಿನ ವಿಚಾರಣೆ ಮುಂದುವರಿಸುವುದಕ್ಕೆ ಅವಕಾಶ ನೀಡಿದೆ. ಇದು ಯಡಿಯೂರಪ್ಪನವರಿಗೆ ಭಾರಿ ಹಿನ್ನಡೆಯುಂಟು ಮಾಡಿವೆ. ಇದನ್ನೆಲ್ಲ ನೋಡಿದರೆ ಸೋಮವಾರ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಸಿಗುವ ಬಗ್ಗೆಯೂ ಅನುಮಾನವಿದೆ.
ಮತ್ತೂಂದೆಡೆ, ಜಾಮೀನು ಅರ್ಜಿ ತಿರಸ್ಕಾರಗೊಂಡರೆ, ಬಂಧನದ ಭೀತಿ ಮತ್ತಷ್ಟು ಜಾಸ್ತಿಯಾಗಲಿದೆ. ಒಟ್ಟಾರೆ, ಸೋಮವಾರ ಯಡಿಯೂರಪ್ಪ ಕೋರ್ಟ್ ಮುಂದೆ ಹಾಜರಾಗುತ್ತಾರೆಯೇ ಎನ್ನುವುದು ಬಹುದೊಡ್ಡ ಕುತೂಹಲಕ್ಕೆ ಎಡೆಮಾಡಿದೆ.